ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ತನ್ನ ಪ್ರಯಾಣಿಕರಿಗೆ ಹೊಸದೊಂದು ಆಫರ್ ಘೋಷಣೆ ಮಾಡಿದ್ದು, ಈ ಆಫರ್ ನಂತೆ ಪ್ರಯಾಣಿಕರು ಕೆಎಸ್ ಆರ್ ಟಿಸಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಬಹುದಂತೆ. ಆದರೆ ಇದಕ್ಕೆ ಷರತ್ತುಗಳು ಅನ್ವಯ...
ಸಿಲಿಕಾನ್ ಸಿಟಿ ಬೆಂಗಳೂರಿನ ಆಕರ್ಷಣೆಯ ಕೇಂದ್ರಗಳಲ್ಲಿ ಮೆಜೆಸ್ಟಿಕ್ ಅರ್ಥಾತ್ ಕೆಂಪೇಗೌಡ ಬಸ್ ನಿಲ್ದಾಣ ಕೂಡ ಒಂದು.. ಇಂದು ರಾಜ್ಯದ ಯಾವುದೇ ಭಾಗದ ಜನರಾದರೂ ಬೆಂಗಳೂರಿನ ಮೆಜೆಸ್ಟಿಕ್ ಅಥವಾ ಕೆಂಪೇಗೌಡ ಬಸ್ ನಿಲ್ದಾಣದ ಹೆಸರು ಕೇಳದವರಿಲ್ಲ. ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸುವ ಈ ನಿಲ್ದಾಣ ಅಷ್ಟೊಂದು ಪ್ರಸಿದ್ಧಿ ಪಡೆದಿದೆ. ನಿತ್ಯ ಈ ಬಸ್ ನಿಲ್ದಾಣಕ್ಕೆ ಲಕ್ಷಾಂತರ ಮಂದಿ ಬಂದು ಹೋಗುತ್ತಾರೆಯಾದರೂ, ಈ ಪೈಕಿ ಬಹುತೇಕರಿಗೆ ಈ ಬಸ್ ನಿಲ್ದಾಣದ ಇತಿಹಾಸ ತಿಳಿದೇ ಇಲ್ಲ. ಆದರೆ ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ಪ್ರಯಾಣಿಕರೆಗೆ ಈ ನಿಲ್ದಾಣದ ಇತಿಹಾಸ ತಿಳಿಸುವ ಪ್ರಯತ್ನಕ್ಕೆ ಕೈಹಾಕಿದ್ದು, ಇದಕ್ಕಾಗಿ ಹೊಸದೊಂದು ಆಫರ್ ಘೋಷಣೆ ಮಾಡಿದೆ.
ಕೆಎಸ್ಆರ್ಟಿಸಿ ಕೆಂಪೇಗೌಡ ಬಸ್ ನಿಲ್ದಾಣವು ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬೆಂಗಳೂರು ನಗರದ ಹೆಮ್ಮೆಯ ಪ್ರತೀಕ ಕೆಂಪೇಗೌಡ ನಿಲ್ದಾಣದ ಇತಿಹಾಸದ ಬಗ್ಗೆ ಮಾಹಿತಿ ನೀಡಿ , ಉಚಿತ ಪ್ರಯಾಣದ ಅವಕಾಶವನ್ನು ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಹುಟ್ಟು, ಮತ್ತು ಅಭಿವೃದ್ಧಿ ಹಲವು ರೋಚಕ ಮಾಹಿತಿಯನ್ನು ಹೊಂದಿದ್ದು, ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಯಾಣಿಕರ ಸಂಪರ್ಕ ನಾಡಿಯಾಗಿದೆ. ಅಂತೆಯೇ ಗ್ರಾಮಾಂತರ ಸಾರಿಗೆ, ನಗರ ಸಾರಿಗೆ, ರೈಲ್ವೆ, ಮೆಟ್ರೋ ಹೀಗೆ ಎಲ್ಲಾ ರೀತಿಯ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ದೇಶದ ಏಕೈಕ ಬಸ್ ನಿಲ್ದಾಣ ಎನ್ನುವ ಹಿರಿಮೆಗೂ ಕೆಂಪೇಗೌಡ ಬಸ್ ನಿಲ್ದಾಣ ಪಾತ್ರವಾಗಿದೆ. ಇದೇ ಕಾರಣಕ್ಕೆ ಕೆಂಪೇಗೌಡ ಬಸ್ ನಿಲ್ದಾಣದ ಇತಿಹಾಸದ ಕುರಿತು ಮಾಹಿತಿ ಮತ್ತು ಚಿತ್ರ ಪಟಗಳನ್ನು ಶೇಖರಿಸಿ ನಿಗಮಕ್ಕೆ ನೀಡಿದರೆ ಅಂತಹವರು ಉಚಿತವಾಗಿ ನಿಗಮದ ಬಸ್ ಗಳಲ್ಲಿ ಪ್ರಯಾಣಿಸಬಹುದಾಗಿದೆ.
ಈ ಬಸ್ ನಿಲ್ದಾಣದ ವರ್ಷಗಳ ಸುದೀರ್ಘ ಪಯಣದ ಬಗ್ಗೆ ಮೌಲ್ಯಾಧಾರಿತ ಮತ್ತು ಅಧಿಕೃತ ಮಾಹಿತಿ, ಇತಿಹಾಸ, ಚಿತ್ರಗಳು, ಕತೆಗಳು, ಲೇಖನಗಳನ್ನು ನಾಗರಿಕರಿಂದ ಆಹ್ವಾನಿಸಲಾಗಿದೆ. ವಿಜೇತರಿಗೆ ಕೆಎಸ್ಆರ್ ಟಿಸಿ ಅಂಬಾರಿ ಡ್ರೀಮ್ ಕ್ಲಾಸ್, ಮಲ್ಟಿ ಆಕ್ಸೆಲ್ ಸ್ಲೀಪರ್ ಬಸ್ ನಲ್ಲಿ ಅವರ ಆಯ್ಕೆಯ ಒಂದು ಮಾರ್ಗದಲ್ಲಿ- ಎರ್ನಾಕುಲಂ, ಪುಣೆ, ಸಿಕಂದರಾಬಾದ್, ವಿಜಯವಾಡಕ್ಕೆ ಹೋಗಿಬರುವ ಪ್ರಯಾಣಕ್ಕೆ ಉಚಿತ ಟಿಕೆಟ್ ನೀಡಲಾಗುತ್ತದೆ ಎಂದು ಕೆಎಸ್ ಆರ್ ಟಿಸಿ ಟ್ವಿಟರ್ ನಲ್ಲಿ ತಿಳಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos