ಬೆಂಗಳೂರು: ಬೆಸ್ಕಾಂ ವಿದ್ಯುತ್ ತಂತಿ ತಗುಲಿ ಗಂಭೀರ ಗಾಯಗೊಂಡು ಕಳೆದ ವಾರವಷ್ತೇ ಆಸ್ಪತ್ರೆಗೆ ದಾಖಲಾಗಿದ್ದ ಬೆಂಗಳೂರಿನ ಮತ್ತಿಕೆರೆ ನೇತಾಜಿ ನಗರದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಅಮರೇಶ್ ಮತ್ತು ರಮಾಬಾಯಿ ದಂಪತಿಯ ಪುತ್ರ ನಿಖಿಲ್ (14) ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಮವಾರ ಸಾವನ್ನಪ್ಪಿದ್ದಾನೆ.
ಯಲಹಂಕ ಡೆಲ್ಲಿ ಪಬ್ಲಿಕ್ ಸ್ಕೂಲ್ನಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಖಿಲ್ ರಜೆ ಇದ್ದ ಕಾರಣ ಸ್ನೇಹಿತರ ಜೊತೆ ಕ್ರಿಕೆಟ್ ಆಡುತ್ತಿದ್ದ. ಆ ನಡುವೆ ಚೆಂಡು ಅಪಾರ್ಟ್ ಮೆಂಟ್ ಒಂದರ ಮಹಡಿ ಮೇಲೆ ಬಿದ್ದಿದೆ. ಚೆಂಡು ತರಲು ಬಾಲಕ ನಿಖಿಲ್ ಮಹಡಿ ಏರಿದ್ದಾನೆ. ಆ ಕಟ್ಟಡದ ಮೇಲೆ ಹಲವಾರು ವಿದ್ಯುತ್ ತಂತಿಗಳು ಹಾದು ಹೋಗಿದೆ. ಅದರಲ್ಲಿ ಮನೆಯ ಸಮೀಪದಲ್ಲೇ ಹಾದುಹೋಗಿದ್ದ ಹೈ ಟೆನ್ಷನ್ ವಿದ್ಯುತ್ ತಂತಿಯನ್ನು ಸ್ಪರ್ಷಿಸಿದ್ದ ನಿಖಿಲ್ಗೆ ವಿದ್ಯುತ್ ಶಾಕ್ ಉಂಟಾಗಿದೆ.
ಬಾಲಕ ಅಲ್ಲೇ ಬಿದ್ದು ಒದ್ದಾಡುತ್ತಿದ್ದಾಗ ಅವನಸ್ನೇಹಿತರು ಹಾಗೂ ಸ್ಥಳೀಯರು ಮೇಲೆ ಹೋಗಿ ಪರಿಶೀಲಿಸಲು ಬಾಲಕನಿಗೆ ಸುಟ್ಟ ಗಾಯಗಳಾಗಿದ್ದವು.ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕೊಂಡೊಯ್ದು ನಂತರ ಹೆಚ್ಚುವರಿ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಾಲಕ ನಿಖಿಲ್ ಸಾವಿನ ಕುರಿತು ಮಾತನಾಡಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ಬಾಲಕನ ಸಾವಿಗೆ ಬೆಸ್ಕಾಂ ನಿರ್ಲಕ್ಷ ಕಾರಣವೋ, ಆಕಸ್ಮಿಕವೋ ಎಂಬುದನ್ನು ತನಿಖೆಯಿಂದ ಬಯಲಿಗೆಳೆಯುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos