ಬೈಂದೂರು: ಕಾರಿಗೆ ಕಾಡುಹಂದಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಚಾಲಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬೈಂದೂರು-ಕೊಲ್ಲೂರು ರಸ್ತೆ ಗೋಳಿಹೊಳೆಯಲ್ಲಿ ನಡೆದಿದೆ.
ಶನಿವಾರ ರಾತ್ರಿ ನಡೆದ ಘಟನೆಯಲ್ಲಿ ಕಾಲ್ತೋಡು ನಿವಾಸಿಯಾಗಿರುವ ಚಂದ್ರಶೇಖರ್ ಶೆಟ್ಟಿ (53) ಎಂಬುವವರು ಸಾವನ್ನಪ್ಪಿದ್ದಾರೆ.
ಹೋಟೆಲ್ ಉದ್ಯಮಿಯಾಗಿದ್ದ ಚಂದ್ರಶೇಖರ್ ಶನಿವಾರ ಹೋಟೆಲ್ ಮುಚ್ಚಿದ ನಂತರ ಪತ್ನಿಯ ಮನೆಯಿದ್ದ ಕಾಲ್ತೋಡಿಗೆ ತೆರಳುತ್ತಿದ್ದರು. ಆಗ ಮಾವಿನಕಾರು ಎಂಬಲ್ಲಿ ಕಾಡುಹಂದಿ ಕಾರಿಗೆ ಅಡ್ಡ ಬಂದಿದೆ. ಹಂದಿಯನ್ನು ತಪ್ಪಿಸಲು ಮುಂದಾದ ಚಂದ್ರಶೇಖರ್ ಗೆ ಕಾರಿನ ಮೇಲಿನ ನಿತ್ಯಂತ್ರಣ ತಪ್ಪಿದೆ. ಕಾಡುಹಂದಿ ಕಾರಿಗೆ ಡಿಕ್ಕಿಯಾದರೆ ಕಾರು ಹೊಂಡಕ್ಕೆ ಇಳಿದು ಮರವೊಂದಕ್ಕೆ ಡಿಕ್ಕಿಯಾಗಿದೆ.
ಅಪಘಾತದಲ್ಲಿ ಚಂದ್ರಶೇಖರ್ ತಲೆ ಭಾಗಕ್ಕೆ ಗಂಭೀರ ಗಾಯವಾಗಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನ ಸ್ಥಳಕ್ಕೆ ಬೈಂದೂರು ಠಾಣೆ ಪಿಎಸ್ಐ ತಿಮ್ಮೇಶ್ ಬಿ.ಎನ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.