ರಾಜ್ಯ

ಇಂದು ರಾಜ್ಯಾದ್ಯಂತ ಸರ್ಕಾರಿ ಶಾಲೆ ಆರಂಭ;ಅತಿ ಉಷ್ಣಾಂಶ ಹಿನ್ನೆಲೆ: ಕಲಬುರಗಿ, ಯಾದಗಿರಿಯಲ್ಲಿ ಜೂನ್ 14ಕ್ಕೆ ಮುಂದೂಡಿಕೆ

Sumana Upadhyaya
ಬೆಂಗಳೂರು: ನಲವತ್ತೈದು ದಿನಗಳ ರಜೆಯ ಮಜಾ ಅನುಭವಿಸಿದ ರಾಜ್ಯದ 90 ಲಕ್ಷಕ್ಕೂ ಅಧಿಕ ಮಕ್ಕಳು ಇಂದು ಶಾಲೆಯತ್ತ ಮುಖ ಮಾಡಿದ್ದಾರೆ. ಶಾಲಾ ಮಕ್ಕಳನ್ನು ಹೂವು, ಸಿಹಿ ತಿಂಡಿ ನೀಡಿ ಶಿಕ್ಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಸ್ವಾಗತಿಸಿವೆ.
ರಾಜ್ಯಾದ್ಯಂತ ಬುಧವಾರ ಸರ್ಕಾರಿ ಶಾಲೆಗಳು ಆರಂಭಗೊಂಡಿವೆಯಾದರೂ,  ರಾಜ್ಯದ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಪ್ರದೇಶಗಳಾದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಶಾಲೆಗಳ ಆರಂಭದ ದಿನಾಂಕವನ್ನು ಜೂನ್ 14ಕ್ಕೆ ಮುಂದೂಡಲಾಗಿದೆ.
ಈ ಜಿಲ್ಲೆಗಳ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚಿರುವ ಹಿನ್ನೆಲೆಯಲ್ಲಿ ಮಕ್ಕಳ ಅರೋಗ್ಯದ ಹಿತದೃಷ್ಟಿಯಿಂದ ಶಾಲೆಗಳ ಪ್ರಾರಂಭೋತ್ಸವವನ್ನು ಎರಡು ವಾರಗಳ ಅವಧಿಗೆ ಮುಂದೂಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಇದರಿಂದ ಉಂಟಾಗುವ ಶಾಲಾ ದಿನಗಳ ಲಭ್ಯತೆಯ ಕೊರತೆ ನೀಗಿಸಲು ಪ್ರತಿ ಶನಿವಾರದ ಪೂರ್ಣ ದಿನ ಹಾಗೂ ಮಧ್ಯಂತರ ರಜಾ ಅವಧಿಯನ್ನು  ಬಳಸಿಕೊಳ್ಳಬಹುದು ಎಂದು ಇಲಾಖೆ ತಿಳಿಸಿದೆ.
ಕಳೆದ ಮೇ 27ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆದ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಸಭೆಯಲ್ಲಿ ಕಲಬುರಗಿ ಹಾಗೂ ಯಾದಗಿರಿಯ ಜಿಲ್ಲಾ ಉಪನಿರ್ದೇಶಕರು, ಶಾಲಾ ಪ್ರಾರಂಭದ ದಿನಾಂಕವನ್ನು ಮುಂದೂಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.
SCROLL FOR NEXT