ರಾಜ್ಯ

ಅಯೋಧ್ಯೆ: ಸುಪ್ರೀಂ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸೋಣ- ಪೇಜಾವರ ಶ್ರೀ ಮನವಿ

Raghavendra Adiga

ಉಡುಪಿ: ಅಯೋಧ್ಯೆ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಸಮಾಜದಲ್ಲಿ ಸಾಮರಸ್ಯ ಕಾಪಾಡಿಕೊಂಡು, ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಸಂಭ್ರಮಾಚರಣೆಯ ಮೆರವಣಿಗೆಗಳನ್ನು ನಡೆಸದಂತೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಜೀ ಜನರಿಗೆ ಮನವಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪನ್ನು ಶಾಂತಿಯುತವಾಗಿ ಸ್ವೀಕರಿಸುವ ಅಗತ್ಯವನ್ನು ಒತ್ತಿಹೇಳಿದ ಪೇಜಾವರ ಶ್ರೀಗಳು, ನ್ಯಾಯಾಲಯವು ತನ್ನ ತೀರ್ಪನ್ನು ಯಾರ ಪರವಾಗಿ ಘೋಷಿಸಿದರೂ ಸಮುದಾಯಗಳು ಇಲ್ಲವೇ ಗುಂಪುಗಳು ವಿಜಯದ ಮೆರವಣಿಗೆಯನ್ನು ನಡೆಸಿದರೆ ಅಥವಾ ಹಿಂಸಾಚಾರಕ್ಕೆ ಇಳಿದರೆ ಅನಿರ್ದಿಷ್ಟ ಉಪವಾಸ ನಡೆಸುವುದಾಗಿ ಹೇಳಿದ್ದಾರೆ.

‘ನವೆಂಬರ್ 15 ಕ್ಕಿಂತ ಮೊದಲು ಈ ವಿಷಯದಲ್ಲಿ ಅಂತಿಮ ತೀರ್ಪು ನಿರೀಕ್ಷಿಸಲಾಗಿದೆ. ಜನರು ತೀರ್ಪನ್ನು ಸ್ವಾಗತಿಸಿ ಆಚರಿಸಲು ಬಯಸುವುದಾದರೆ, ಅವರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಬಹುದು.’ ಎಂದು ಶ್ರೀಗಳು ಶುಕ್ರವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತೀರ್ಪು ಹಿಂದೂಗಳ ಪರವಾಗಿಯೇ ಇರಲಿದೆ ಎಂಬ ಭರವಸೆ ನಮಗಿದೆ. ಆದರೆ ಒಂದೊಮ್ಮೆ ಮುಸ್ಲಿಮರ ಪರ ಬಂದರೂ ದೇಶದಲ್ಲಿ ಹಿಂಸೆ ಸಂಭವಿಸಬಾರದು. ಸಂವಿಧಾನಕ್ಕೂ, ಸುಪ್ರೀಂ ಕೋರ್ಟ್ ಗೂ ಎಲ್ಲರೂ ಗೌರವ ಕೊಡಬೇಕೆಂದು ನಾವು ಇಚ್ಚಿಸುತ್ತೇವೆ ಎಂದು ಶ್ರೀಗಳು ಹೇಳಿದ್ದಾರೆ.

ರಾಮ ಮಂದಿರ ನಿರ್ಮಾಣ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಯೋಜನೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಕುರಿತ ಇತಿಹಾಸದ ಪಾಠ್ಯಗಳನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದುಹಾಕುವ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ ಅವರು, ಐತಿಹಾಸಿಕ ಸಂಗತಿಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಕಾರ್ಯಗಳ ಎರಡೂ ಬದಿಗಳನ್ನು ತೋರಿಸಬೇಕು ಎಂದು ಹೇಳಿದರು.

ಟಿಪ್ಪುವಿನ ಆಡಳಿತವು ಉತ್ತಮವಾಗಿದ್ದರೂ, ಕೊಡಗು ಜಿಲ್ಲೆಯವರು ಮತ್ತು ಕ್ರೈಸ್ತರು ಆತನು ನಡೆಸಿದ್ದಾನೆಲ್ಲಾದ ಹತ್ಯಾಕಾಂಡಗಳ ಬಗ್ಗೆ ದೂಷಿಸಿದ್ದಾರೆ. ‘ಒಳ್ಳೆಯದು ಮತ್ತು ಕೆಟ್ಟದ್ದನ್ನು ಮಾಡಿದ ಅನೇಕ ರಾಜರು ಇದ್ದರು. ಅವರನ್ನು ಅತಿಯಾಗಿ ವೈಭವೀಕರಿಸಬಾರದು. ಟಿಪ್ಪು ನಡೆಸಿದ ಕೆಲ ಯುದ್ಧಗಳನ್ನು ಪಾಠದಲ್ಲಿ ಉಲ್ಲೇಖಿಸಿದರೆ ಅದು ತಪ್ಪಾಗುವುದಿಲ್ಲ.’ಎಂದು ಶ್ರೀಗಳು ಹೇಳಿದ್ದಾರೆ.

SCROLL FOR NEXT