ರಾಜ್ಯ

ಹಿಂದೂಗಳು ಸಹ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸಲು ಸಹಕರಿಸಿ ಸೌಹಾರ್ದತೆ ಮೆರೆಯಬೇಕು - ಪೇಜಾವರ ಸ್ವಾಮೀಜಿ

Srinivas Rao BV

ಬೆಳಗಾವಿ: 1992ರಲ್ಲಿ ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಬಿಜೆಪಿ ವರಿಷ್ಠ ನಾಯಕ ಎಲ್ ಕೆ ಅಡ್ವಾಣಿ, ಮತ್ತಿತರ ಕರಸೇವಕರ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀಥ೯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಗಳನ್ನು ಹಿಂಪಡೆಯಬೇಕೆನ್ನುವ ಹಿಂದೂ ಸಂಘಟನೆಗಳ ಬೇಡಿಕೆಗೆ ತಮ್ಮ ಸಹಮತವಿದೆ. ರಾಮ ಜನ್ಮಭೂಮಿ ನಿರ್ಮಾಣ ಕುರಿತಂತೆ ನಡೆದದ್ದು ಚಳವಳಿ. ಅದೊಂದು ಸ್ವಾತಂತ್ರ್ಯ ಆಂದೋಲನ. ಇಂತಹ ಆಂದೋಲನದಲ್ಲಿ ಭಾಗಿಯಾದವರ ಮೇಲೆ ಪ್ರಕರಣ ದಾಖಲಿಸಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. 

ನ್ಯಾಯಾಲಯ ತೀರ್ಪು ಯಾರಿಗೂ ಬೇಸರವಾಗಿಲ್ಲ. ಹಿಂದೂಗಳಿಗೆ ರಾಮಜನ್ಮಭೂಮಿಯ ಜಾಗ ನೀಡಿದರೆ ಮುಸ್ಲಿಮರಿಗೆ ಮಸೀದಿಯನ್ನು ನಿರ್ಮಿಸಲು ಜಾಗವನ್ನು ಕೊಟ್ಟಿದೆ. ಅನೇಕ ಮುಸ್ಲಿಮರು ತೀರ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಸೌಹಾರ್ದತೆ ಕೆಡಿಸುವ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಆಗದಂತೆ ಮುನ್ನಡೆಯಬೇಕಾಗಿದೆ. ಮುಸ್ಲಿಮರು ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಅದರಂತೆ ಹಿಂದೂಗಳು ಮಸೀದಿಯನ್ನು ನಿರ್ಮಿಸಲು ಸಹಕರಿಸಿ ಸೌಹಾರ್ದತೆಯನ್ನು ಮೆರೆಯಬೇಕು ಎಂದು ಸ್ವಾಮೀಜಿ ಮನವಿ ಮಾಡಿಕೊಂಡರು. ಮುಂದೆ ಮಾತನಾಡಿದ ಅವರು, ಬಾಬ್ರಿ ಮಸೀದಿಯಂತೆ ಮಥುರಾ ಮತ್ತು ಕಾಶಿ ಗಳಲ್ಲೂ ಇಂತಹ  ಪ್ರಕರಣಗಳು ಮರುಕಳಿಸಬಹುದು ಎನ್ನುವ ವಾದವನ್ನು ಅವರು ಒಪ್ಪಲಿಲ್ಲ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಈಗಾಗಲೇ ಆರಂಭಿಸಿದ್ದು ಯಾವುದೇ ಸಂಘರ್ಷಕ್ಕೆ ಅವಕಾಶ ಇಲ್ಲ ಎಂದು ಪೇಜಾವರ ಸ್ವಾಮೀಜಿ ಹೇಳಿದರು.

SCROLL FOR NEXT