ರಾಜ್ಯ

ಕನಕದಾಸ ಜಯಂತಿ: ಸಿಎಂ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ

Raghavendra Adiga

ಬೆಂಗಳೂರು: ದಾಸ ಶ್ರೇಷ್ಠರಾದ ಸಂತ ಕನಕದಾಸರ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ನಾಡಿನ ರಾಜಕೀಯ ನಾಯಕರು, ಸಾಮಾಜಿಕ ಧುರೀಣರು ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿ, ತಮ್ಮ ಸಾಹಿತ್ಯದಲ್ಲಿ ವಿಡಂಬನೆಯ ಮೂಲಕ ಸಮಾಜದ ಸಾಕ್ಷಿಪ್ರಜ್ಞೆ ಯನ್ನೂ ಬಡಿದೆಬ್ಬಿಸಿದ, ಭಕ್ತಿ ರಸದ ಹೊನಲು ಹರಿಸಿದ ಸಂತಶ್ರೇಷ್ಠ ಕನಕದಾಸರ ಜಯಂತಿ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

ಸಮಸ್ತ ಜನತೆಗೆ ದಾಸ ಶ್ರೇಷ್ಠರಾದ, ಸಂತ ಕನಕದಾಸರ ಜಯಂತಿಯ ಶುಭಾಶಯಗಳು. ಸಮಾಜದ ಮೇಲು, ಕೀಳು, ಜಾತಿ, ಮತ ಸಿದ್ಧಾಂತದ ವಿರುದ್ಧ ಪ್ರತಿಭಟನಾ ನೆಲೆಗಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ವೈಚಾರಿಕ ಪ್ರಭೆ ತಂದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವರ ನೀಡಿದ ಆದರ್ಶ ನಮಗೆಲ್ಲರಿಗೂ ದಾರಿದೀಪವಾಗಲಿ ಎಂದು ಯಡಿಯೂರಪ್ಪ ಆಶಿಸಿದ್ದಾರೆ.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ "ಐದುನೂರು ವರ್ಷಗಳ ಹಿಂದೆಯೇ 'ಕುಲ ಕುಲ ಎಂದು ಹೊಡೆದಾಡದಿರಿ...' ಎಂದು ವರ್ಣಾಶ್ರಮ ವ್ಯವಸ್ಥೆ ಸೃಷ್ಟಿಸಿರುವ ಜಾತಿ ನರಕವನ್ನು ದಿಟ್ಟತನದಿಂದ ಪ್ರಶ್ನಿಸಿ ಆತ್ಮಾವಲೋಕನಕ್ಕೆ ಕರೆಕೊಟ್ಟ ಸಂತ ಕನಕದಾಸರನ್ನು ಇಂದು ನೆನೆಯೋಣ, ಅವರು ತೋರಿದ ದಾರಿಯಲ್ಲಿ ಸಾಗೋಣ." ಎಂದಿದ್ದಾರೆ ಅಲ್ಲದೆ "ನಮಗಿಂದು ಬೇಕಾಗಿರುವುದು ಕನಕದಾಸರು ಪ್ರತಿಪಾದಿಸಿದ ಜಾತಿ-ವರ್ಣ-ವರ್ಗ-ಲಿಂಗ ಭೇದ ಇಲ್ಲದ ಹಿಂದು ಧರ್ಮ. ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುವ ಧರ್ಮ ಅಲ್ಲ. ಕನಕನೆಡೆಗೆ ನಮ್ಮ ನಡೆ ಇರಲಿ." ಎಂದು ಹಾರೈಸಿದ್ದಾರೆ.

ಇನ್ನೋರ್ವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಸಹ ಕನಕ ಜಯಂತಿಗೆ ಶುಭಕೋರಿದ್ದು "ಸಮಸ್ತ ಕನ್ನಡನಾಡಿನ ಜನತೆಗೆ ಕನಕ ಜಯಂತಿಯ ಹಾರ್ದಿಕ ಶುಭಾಶಯಗಳು. ಜಾತಿ ಮತಗಳ ಕಟ್ಟು ಪಾಡುಗಳಿಲ್ಲದೇ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಾಯ್ನುಡಿಯಲ್ಲಿ ಹಾಡಿ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಅತ್ಯಮೂಲ್ಯವಾದ ಕೊಡುಗೆ ನೀಡಿದ ದಾಸಶ್ರೇಷ್ಠರು ಕನಕದಾಸರು." ಎಂದಿದ್ದಾರೆ.

"ದಾಸಪದದ ಮೂಲಕವೇ ಜಾತಿ ವ್ಯವಸ್ಥೆಯ ತಾರತಮ್ಯಗಳ ವಿರುದ್ಧ ಸಮರ ಸಾರಿದ್ದ  ದಾಸ ಶ್ರೇಷ್ಠ ಶ್ರೀ ಕನಕ ದಾಸರ ಜಯಂತಿಯ ಶುಭಾಶಯಗಳು." ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

SCROLL FOR NEXT