ರಾಜ್ಯ

ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಕುರುಬ ಸಮುದಾಯ: ಇಂದು ರಾಜ್ಯದ ಎರಡು ಪಟ್ಟಣಗಳು ಬಂದ್

Manjula VN

ಬೆಂಗಳೂರು: ಹೊಸದುರ್ಗದ ಕನಕ ಪೀಠದ ಶಾಖಾ ಮಠದ ಈಶ್ವರಾನಂದ ಶ್ರೀಗಳ ಬಗ್ಗೆ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಬುಧವಾರ ರಾಜ್ಯದ ಹಲವೆಡೆ ಕುರುಬ ಸಮುದಾಯದ ಸಂಘಟನೆಗಳು ಪ್ರತಿಭಟನೆ ನಡೆಸಿದವು. 

ಇದೇ ವೇಳೆ ಮಾದುಸ್ವಾಮಿ ವಿರುದ್ಧ ಗುರುವಾರ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣ, ಶಿವಮೊಗ್ಗದ ಶಿಕಾರಿಪುರದಲ್ಲಿ ಬಂದ್'ಗೆ ಕರೆ ನೀಡಲಾಗಿದೆ. 

ಹೊಸದುರ್ಗದ ಕನದ ಪೀಠದ ಶಾಖಾ ಮಠದ ಈಶ್ವರಾನಂದ ಶ್ರೀಗಳಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿಯವರು ಅವಮಾನಿಸಿದ್ದಾರೆಂಬ ಆರೋಪಗಳು ಕೇಳಿ ಬಂದಿವೆ. 

ಈ ಹಿನ್ನಲೆಯಲ್ಲಿ ರಾಜ್ಯದ ಹಲವೆಡೆ ವಿವಿಧ ಕುರುಬ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಾಧುಸ್ವಾಮಿಯವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸುತ್ತಿವೆ. ಕ್ಷಮೆಯಾಚಿಸದಿದ್ದರೆ ಸಚಿವರು ಹೋದಲ್ಲೆಲ್ಲಾ ಪ್ರತಿಭಟನೆ ನಡೆಸುವುದಾಗಿ ಹಾಗೂ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಸಿವೆ. 

ಈ ನಡುವೆ ವಿವಿಧ ಕುರುಬ ಸಂಘಟನೆಗಳು ಗುರುವಾರ ಹುಳಿಯಾರು ಹಾಗೂ ಶಿಕಾರಿಪುರ ಬಂದ್'ಗೆ ಕರೆ ನೀಡಿವೆ. 

ಜಿಲ್ಲಾ ಪಂಚಾಯತ್ ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ವಯಂ ಘೋಷಿತ ಬಂದ್ ಆಚರಿಸಲಾಗುತ್ತಿದೆ. ಬೆಳಿಗ್ಗೆ 10 ರಿಂದ 12ಗಂಟೆಯವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಮಾಧುಸ್ವಾಮಿ ಪರ ಈಶ್ವರಪ್ಪ ಬ್ಯಾಟಿಂಗ್
ಕುರುಬ ಸಮುದಾಯ ಕುರಿತು ಹೇಳಿಕೆ ನೀಡಿರುವ ಸಚಿವ ಮಾಧುಸ್ವಾಮಿ ಪರ ಈಶ್ವರಪ್ಪ ಅವರು ಬ್ಯಾಟಿಂಗ್ ಮಾಡಿದ್ದು, ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ. 

ಮಾಧುಸ್ವಾಮಿಯವರು ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ನೀವು ರಾಜಕಾರಣ ಮಾಡಲು ಹೊರಟರೆ ಹೇಗೆ? ನೀವು ಮಾಡಿದ ವ್ಯಭಿಚಾರಕ್ಕೆ ಇಷ್ಟೆಲ್ಲಾ ಗೊಂದಲ ಉಂಟಾಗಿದೆ. ಅವರು, ಸ್ಪಷ್ಟವಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ, ಚುನಾವಣೆ ಮುಗಿಯುವ ತನಕ ನೀವು ವಿಚಾರವನ್ನು ಮುಗಿಸಲ್ಲ ಎಂದು ಕಿಡಿಕಾರಿದ್ದಾರೆ. 

SCROLL FOR NEXT