ರಾಜ್ಯ

ಸ್ವಾತಂತ್ರ ಸಂಗ್ರಾಮದಂತೆ ಸ್ವಚ್ಛತಾ ಸಂಗ್ರಾಮ ಆಗಬೇಕು: ಕೇಂದ್ರ ಸಚಿವ ಸದಾನಂದಗೌಡ

Srinivasamurthy VN

ಬೆಂಗಳೂರು: ಜಲ ಸಂರಕ್ಷಣೆ, ಸ್ವಚ್ಛತೆ ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಮೀಸಲಾಗಬಾರದು. ನೀರು ನಿರ್ವಹಣೆ, ಶುಚಿತ್ವ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು. ಸ್ವಾತಂತ್ರ ಸಂಗ್ರಾಮದಂತೆ ಸ್ವಚ್ಛತಾ ಸಂಗ್ರಾಮ ಆಗಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನ‌ ಪ್ರಯುಕ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ಕೃಷಿ ವಿಜ್ಞಾನ ಕೇಂದ್ರದಲ್ಲಿ ಜಲಸಾಕ್ಷರತೆ ಮೂಡಿಸುವ ಜಲಶಕ್ತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 2014 ರಲ್ಲಿ ನರೇಂದ್ರ ಮೋದಿ ಸ್ವಚ್ಛತಾ ಪರಿಕಲ್ಪನೆಗೆ ಇಟ್ಟ ದಿಟ್ಟ ಹೆಜ್ಜೆ ಇಂದು ಮಹತ್ವದ ಫಲ ನೀಡುತ್ತಿದೆ. ದೇಶದ ಜನ ತಮ್ಮ ಆದಾಯದ ಶೇ. 15 ರಷ್ಟು ಭಾಗವನ್ನು ಆರೋಗ್ಯಕ್ಕಾಗಿ ವೆಚ್ಚ ಮಾಡುವುದನ್ನು ಮನಗಂಡು ಮೋದಿ ಅವರು 2017 ರಲ್ಲಿ ಸ್ವಚ್ಛತಾ ಆಂದೋಲನಕ್ಕೆ ವೇಗ ನೀಡಿದರು. ಅದರ ಪ್ರತಿಫಲ ಈಗ ನಾವು ಎಲ್ಲೆಡೆ ಕಾಣುತ್ತಿದ್ದೇವೆ ಎಂದರು.

ಇದೀಗ ಮೋದಿ ಜಲ ಶಕ್ತಿ ಅಭಿಯಾನಕ್ಕೆ ಒತ್ತು ಕೊಟ್ಟಿದ್ದು, ನೀರಿನ ಮಹತ್ವದ ಬಗ್ಗೆ ಎಲ್ಲೆಡೆ ಅರಿವು ಮೂಡಿಸಬೇಕಿದೆ. ಕಳೆದ ಬಾರಿ ಪ್ರವಾಹದಿಂದ ಕೇರಳ ಮುಳುಗಿ ಹೋಗಿತ್ತು. ಆದರೆ ಅದಾದ ಮೂರು ತಿಂಗಳ ಬಳಿಕ ಅಲ್ಲಿ ನೀರಿಗಾಗಿ ಹಾಹಾಕಾರ ತಲೆದೋರಿತ್ತು. ಇದನ್ನು ಮನಗಂಡು ನೀತಿ ಆಯೋಗ 2030 ಕ್ಕೆ ಈಗಿರುವ ಅಗತ್ಯಕ್ಕಿಂತ ಎರಡುಪಟ್ಟು ನೀರು ಬೇಕು ಎಂದು‌ ಮುನ್ನೆಚ್ಚರಿಕೆ ನೀಡಿದೆ. ಈ ಸವಾಲನ್ನು ಈಗಲೇ ಎದುರಿಸಬೇಕೆಂದು ಮೋದಿ ಜಲಶಕ್ತಿಗಾಗಿ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ.‌ ಸ್ವಾತಂತ್ರ‌ ಸಂಗ್ರಾಮ ಜನ್ಮಸಿದ್ಧ ಹಕ್ಕು ಎಂದು ಪಣತೊಟ್ಟಂತೆ ಸ್ವಚ್ಛತೆ ಮತ್ತು ಜಲ ಉಳಿತಾಯ ನಮ್ಮ ಸಂಗ್ರಾಮ ಆಗಬೇಕು.‌ ಜನರು ಉಳಿದರೆ ಮಾತ್ರ ಐಟಿಬಿಟಿ, ಸಮಾಜ ಉಳಿಯಲು ಸಾಧ್ಯ ಎಂದರು.

SCROLL FOR NEXT