ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2019 ಮೂರನೇ ದಿನಕ್ಕೆ ಕಾಲಿಟ್ಟಿದ್ದು, ದಸರಾ ಮಹೋತ್ಸವಕ್ಕೆ ಪಾರಂಪರಿಕ ನಡಿಗೆ ಮತ್ತಷ್ಟು ಮೆರಗು ನೀಡಿತು.
ದಸರಾ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ನಗರದಲ್ಲಿ ಪಾರಂಪರಿಕ ನಡಿಗೆಯನ್ನು ಆಯೋಜಿಸಲಾಗಿತ್ತು. ನಗರದ ಪುರಭವನದಿಂದ ಪಾರಂಪರಿಕ ನಡಿಗೆ ಪ್ರಾರಂಭವಾಗಿ ದೊಡ್ಡ ಗಡಿಯಾರ, ಓಲ್ಡ್ ಸ್ಟ್ಯಾಚು ವೃತ್ತ, ಮೈಸೂರು ಅರಮನೆ, ಕೆ.ಆರ್.ವೃತ್ತ, ದೇವರಾಜ ಮಾರುಕಟ್ಟೆ, ಕೆ.ಆರ್, ಆಸ್ಪತ್ರೆ ರಸ್ತೆ ಕಟ್ಟಡದ ಬಳಿ ಅಂತ್ಯಗೊಂಡಿತು.
ಪಾರಂಪರಿಕ ನಡಿಗೆಯಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾದ್ ಸೇರಿದಂತೆ ಇನ್ನಿತರೆ ಗಣ್ಯರು ಪಾಲ್ಗೊಂಡಿದ್ದರು. ಪ್ರತಿಯೊಂದು ಪಾರಂಪರಿಕ ಕಟ್ಟಡಗಳ ಬಳಿ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿಯನ್ನು ಇತಿಹಾಸ ತಜ್ಞರಾದ ರಂಗರಾಜು, ಈಚನೂರು ಕುಮಾರ್ ತಿಳಿಸಿಕೊಟ್ಟರು.
ಈ ಬಾರಿ ಪಾರಂಪರಿಕ ಉಡುಗೆಯನ್ನು ತೊಡ್ಡು ಅಂದರೆ, ಪುರುಷರು ಪಂಜೆ, ಶರ್ಟ್, ಶಲ್ಯ ಧರಿಸಿದ್ದರೆ, ಮಹಿಳೆಯರು ಸೀರೆ ಧರಿಸಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಲ್ಲದೆ, 600 ಹೆಚ್ಚು ಜನರು ಈ ನಡಿಗೆಯಲ್ಲಿ ಭಾಗವಹಿಸುವ ಮೂಲಕ ಪಾರಂಪರಿಕ ನಡಿಗೆ ಯಶಸ್ವಿಕಾಣುವಂತೆ ಮಾಡಿದರು.
ಪ್ರೊ.ರಂಗರಾಜು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಚಾಮರಾಜ ಒಡೆಯರ್ ಸೇರಿದಂತೆ ರಾಜ ಪಾರಂಪರ್ಯದ ಬಗ್ಗೆ ಜನರು ತಿಳಿದುಕೊಳ್ಳಲು ಇಚ್ಛಿಸುತ್ತಿದ್ದಾರೆ. ಪಾರಂಪರಿಕ ನಡಿಗೆಯಲ್ಲಿ ಜನರ ಪ್ರತಿಕ್ರಿಯೆ ಅತ್ಯುತ್ತಮವಾಗಿದೆ. ಪ್ರಮುಖವಾಗಿ ಯುವಕರು ಪಾಲ್ಗೊಂಡಿದ್ದಾರೆ. ನಾಡಿನ ಪಾರಂಪರ್ಯವನ್ನು ಅಭಿವೃದ್ಧಿಗೊಳಿಸುವತ್ತ ಸರ್ಕಾರ ಗಮನಹರಿಸಬೇಕು. ಇದಕ್ಕೆ ಅಗತ್ಯವಾದ ಅನುದಾನ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ತೇರಿ ಮೇರಿ ಖ್ಯಾತಿಯ ಗಾಯಕಿ ರಾನು ಮಂಡರ್ ಗೈರು
ಬಹು ನಿರೀಕ್ಷಿತ ಮೈಸೂರು ಯುವ ದಸರಾಗೆ ಮಂಗಳವಾರ ಸಂಜೆ ವರ್ಣ ರಂಜಿತ ಚಾಲನೆ ದೊರೆತಿದ್ದು, ಒಲಿಂಪಿಕ್ಸ್ ಪದಕ ವಿಜೇತೆ, ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಉದ್ಘಾಟಿಸಿದರು. ಆದರೆ, ದಸರೆಯ ಮತ್ತೊಂದು ಆಕರ್ಷಣೆಯಾಗಿದ್ದ ತೇರಿ ಮೇರಿ ಖ್ಯಾತಿಯ ಗಾಯಕಿ ರಾನು ಮಂಡಲ್ ಅವರು ಅನಾರೋಗ್ಯದಿಂದಾಗಿ ಕಾರ್ಯಕ್ರಮಕ್ಕೆ ಗೈರಾಗಿದ್ದು, ಪ್ರೇಕ್ಷಕರಲ್ಲಿ ನಿರಾಸೆಯನ್ನುಂಟು ಮಾಡಿತು.
ಮಳೆಯ ನಡುವೆಯೇ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆಗೂಡು ಸಿಂಧು ಅವರು ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ದಸರಾ ಕ್ರೀಡಾಕೂಡ ಉದ್ಘಾಸಿಸಿದ ಸಿಂಧು ಅವರು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದರು. ಎಲ್ಲರಿಗೂ ನಮಸ್ಕಾರ, ಹೇಗಿದ್ದೀರಾ? ಎಲ್ಲರಿಗೂ ದಸರಾ ಶುಭಾಶಯಗಳು ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿದ್ದ ಜನರಿಂದ ಚಪ್ಪಾಳೆಯ ಸದ್ದು ಮುಗಿಲು ಮುಟ್ಟಿತು.