ರಾಜ್ಯ

ಅನುಮತಿಸಿದ್ದಕ್ಕಿಂತಲೂ ಹೆಚ್ಚು ಸಂದರ್ಶಕರಿಂದ ಶಶಿಕಲಾ ಭೇಟಿ: ಆರ್'ಟಿಐ 

Manjula VN

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿ ಮಾಡಲು ಅನುಮತಿಸಿದ್ದಕ್ಕಿಂತಲೂ ಹೆಚ್ಚು ಜನರಿಗೆ ಅವಕಾಶ ಮಾಡಿಕೊಡಲಾಗಿದೆ ಎಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 

ಆರ್'ಟಿಐ ಕಾರ್ಯಕರ್ತ ಹಾಗೂ ವಕೀಲ ನರಸಿಂಹ ಮೂರ್ತಿಯವರು ಈ ಮಾಹಿತಿ ಸಂಗ್ರಹಿಸಿದ್ದು, ಜೈಲು ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, ಆಗಸ್ಟ್ 20 ರಂದು ಶಶಿಕಲಾ ಅವರಿಗೆ ಒಂದೇ ದಿನದಲ್ಲಿ 6 ಜನರು ಭೇಟಿ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದು ಜೈಲಿನ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿದುಬಂದಿದೆ. 

ಆಗಸ್ಟ್ 20 ರಂದು ಮಧ್ಯಾಹ್ನ 1 ಗಂಟೆಯಿಂದ 1.45ರ ಸುಮಾರಿಗೆ 6 ಜನರು ಶಶಿಕಲಾ ಅವರನ್ನು ಭೇಟಿ ಮಾಡಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ವಿ.ಚಂದ್ರಲೇಖಾ, ಶಶಲಿಕಾ ಸಂಬಂಧಿಕ ಟಿಟಿವಿ ದಿನಕರನ್, ಅವರ ಪತ್ನಿ ಅನುರಾಧ, ಪುತ್ರಿ ಜಯಹರಿಣಿ, ದೇವಾಡಿ ರಾಜನ್ ಮತ್ತು ಪುಗಲೇಂಧಿ ಶಶಿಕಲಾ ಅವರನ್ನು ಭೇಟಿ ಮಾಡಿದ್ದಾರೆ. 

ದಿನಕರನ್, ಅವರ ಪತ್ನಿ ಹಾಗೂ ಪುತ್ರಿಯನ್ನು ಕುಟುಂಬ ಸದಸ್ಯರೆಂದು ಹೇಳಲಾಗಿದ್ದು, ಇನ್ನುಳಿದ ಮೂವರನ್ನು ಸ್ನೇಹಿತರೆಂದು ದಾಖಲೆ ಪುಸ್ತಕದಲ್ಲಿ ಬರೆಯಲಾಗಿದೆ. ಕರ್ನಾಟಕ ಜೈಲಿನ ನಿಯಮಗಳ ಪ್ರಕಾರ ಒಂದು ದಿನಕ್ಕೆ 4 ಜನರನ್ನು ಮಾತ್ರವೇ ಖೈದಿಗಳು ಭೇಟಿ ಮಾಡಲು ಅವಕಾಶ ನೀಡಲಾಗುತ್ತೆದ. ಆದರೆ, ಶಶಿಕಲಾ ಪ್ರಕರಣದಲ್ಲಿ 6 ಜನರಿಗೆ ಭೇಟಿ ಮಾಡಲು ಅವಕಾಶ ನೀಡಿರುವುದು ನಿಯಮಗಳನ್ನು ಉಲ್ಲಂಘಿಸಿದಂತಾಗಿದೆ. 

ಜೈಲಿನಲ್ಲಿ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ವರದಿಗಳು ಸಲ್ಲಿಕೆಯಾಗಿದ್ದರು, ತಪ್ಪಿತಸ್ಥರ ವಿರುದ್ಧ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆಂದು ಆರ್'ಟಿಐ ಕಾರ್ಯಕರ್ತ ಮೂರ್ತಿಯವರು ಹೇಳಿದ್ದಾರೆ. 

ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿರುವ ಕುರಿತಂತೆ ಈ ಹಿಂದೆ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಿತ್ತು, ವರದಿಯಲ್ಲಿ ಶಶಿಕಲಾ ಅವರಿಗೆ ಜೈಲಿನಲ್ಲಿ ವಿಶೇಷ ಸವಲತ್ತು ನೀಡಿರುವುದು ಬಹಿರಂಗಗೊಂಡಿತ್ತು. 

SCROLL FOR NEXT