ಬೆಂಗಳೂರು: ಲಲಿತಾ ಜ್ಯೂವೆಲ್ಲರ್ಸ್ ಕಳ್ಳತನ ಪ್ರಕರಣದ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ತಿರುಚ್ಚಿ ಮೂಲದ ತಿರುವರೂರ್ ಮುರುಗನ್ ಪೊಲೀಸರಿಗೆ ಶರಣಾಗಿದ್ದಾನೆ, ಶುಕ್ರವಾರ ಬೆಂಗಳೂರು ಸಿಟಿ ಕೋರ್ಟ್ ಗೆ ಆರೋಪಿಯನ್ನು ಹಾಜರು ಪಡಿಸಲಾಗುವುದು.
ಲಲಿತಾ ಜ್ಯುವೆಲ್ಲರ್ಸ್ ನಲ್ಲಿ 13 ಕೋಟಿ ರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಗಿದೆ.ಕರ್ನಾಟಕ ಪೊಲೀಸರು ಶರಣಾಗುವಂತೆ ಆತನಿಗೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲವು ದಿನಗಳ ಹಿಂದೆ ನಡೆದಿದ್ದ ಪ್ರಕರಣ ಸಂಬಂಧ 50 ವರ್ಷದ ಮುರುಗನ್ ಅಲಿಯಾಸ್ ಬಾಲಮುರುಗನ್ ಅಲಿಯಾಸ್ ಶಿವಕುಮಾರ್ ನನ್ನು ಇಂದು 11ನೇ ಎಸಿಎಂಎಂ ಕೋರ್ಟ್ ನಲ್ಲಿ ಹಾಜರು ಪಡಿಸಲಾಗುವುದು,
ಬೆಂಗಳೂರು ನಗರದಲ್ಲಿ ನಡೆದ ಸುಮಾರು 80 ಮನೆಕಳ್ಳತನ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದಾನೆ, ಭಾಣಸವಾಡಿ ಪೊಲೀಸ್ ಠಾಣೆಯೊಂದರಲ್ಲೆ ಸುಮಾರು 60 ಕೇಸ್ ಗಳು ದಾಖಲಾಗಿವೆ, ಹಲವು ಕೇಸ್ ಗಳಲ್ಲಿ ಆತನ ವಿರುದ್ಧ ವಾರಂಟ್ ಹೊರಡಿಸಲಾಗಿದೆ, ಆದರೆ ಆತ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದಾನೆ.