ರಾಜ್ಯ

ವಿಜಯಪುರ- ಯಶವಂತಪುರ ನಡುವೆ ನೇರ ರೈಲಿಗೆ ಸಚಿವ ಸುರೇಶ್ ಅಂಗಡಿ ಹಸಿರು ನಿಶಾನೆ

Lingaraj Badiger

ವಿಜಯಪುರ: ವಿಜಯಪುರದಿಂದ ಬೆಂಗಳೂರಿನ ಯಶವಂತಪುರ ನಡುವೆ ನೇರ ರೈಲು ಸೇವೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಸಿ ಅಂಗಡಿ ಅವರು ಹಸಿರು ನಿಶಾನೆ ತೋರಿದರು.

ಸಚಿವರು ಆರಂಭಿಕ ವಿಶೇಷ ರೈಲು ಸಂಖ್ಯೆ 06542 ವಿಜಯಪುರ- ಯಶವಂತಪುರ ಎಕ್ಸ್‌ಪ್ರೆಸ್‍ಗೆ ನಿನ್ನೆ ವಿಜಯಪುರ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿದರು.

ವಿಜಯಪುರದಿಂದ ಬೆಂಗಳೂರು -ಯಶವಂತಪುರ ನೇರ ರೈಲು ಸಂಚಾರದಿಂದ ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‍ ಕುಮಾರ್ ಸಿಂಗ್ ತಮ್ಮ ಸ್ವಾಗತ ಭಾಷಣದಲ್ಲಿ ಹೇಳಿದ್ದಾರೆ.

ಈ ರೈಲು ಕರ್ನಾಟಕದ 11 ಜಿಲ್ಲೆಗಳ ಪ್ರಮುಖ ಭಾಗಗಳನ್ನು ಸಂಪರ್ಕಿಸುತ್ತದೆ. ಈ ಪ್ರದೇಶದ ಹೆಚ್ಚಿನ ಜನರು ಬೆಂಗಳೂರಿನಲ್ಲಿ ಕೆಲಸ ಇಲ್ಲವೇ ಅಧ್ಯಯನ ಮಾಡುತ್ತಿರುವುದರಿಂದ ಈ ರೈಲು ಅವರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇದು ಕರ್ನಾಟಕದ ಬಹುತೇಕ ಭಾಗಗಳಿಗೆ ಸಂಪರ್ಕ ಕಲ್ಪಿಸುವುದರಿಂದ ಈ ಪ್ರದೇಶದ ವ್ಯಾಪಾರ ಮತ್ತು ವಾಣಿಜ್ಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ಪ್ರವಾಸಿ ಆಸಕ್ತಿಯ ಸ್ಥಳಗಳು ಮತ್ತು ಪಾರಂಪರಿಕ ತಾಣಗಳಾದ ಹೊಸಪೇಟೆ (ಹಂಪಿ), ಬಾದಾಮಿ ಮತ್ತು ವಿಜಯಪುರ ಇತ್ಯಾದಿ ಸ್ಥಳಗಳಿಗೆ ಸಂಪರ್ಕ ಒದಗಿಸುವುದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿಯಾಗಲಿದೆ ಎಂದರು.

ವಿಜಯಪುರ ಜಿಲ್ಲೆಯ ಜನರಿಗೆ ಹಬ್ಬದ ಉಡುಗೊರೆಯಾಗಿ ದೀಪಾವಳಿಯ ಮೊದಲು ಹೊಸ ರೈಲು ಸೇವೆ ಆರಂಭಿಸಲಾಗಿದೆ ಎಂದು ಸಚಿವ ಸುರೇಶ್ ಅಂಗಡಿ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ.

SCROLL FOR NEXT