ರಾಜ್ಯ

ಹುಬ್ಬಳ್ಳಿ: ಹಾಸ್ಟೆಲ್ ವಾರ್ಡನ್ ನಿಂದ ಹಲ್ಲೆಗೊಳಗಾದ ಬಾಲಕ ಸಾವು

Raghavendra Adiga

ಹುಬ್ಬಳ್ಳಿ: ಹಾಸ್ಟೆಲ್ ವಾರ್ಡನ್ ನಿಂದ ಹಲ್ಲೆಗೊಳಗಾಗಿ ಕಳೆದ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4ನೇ ತರಗತಿ ವಿದ್ಯಾರ್ಥಿ ವಿಜಯ ಮೃತ್ಯುಂಜಯ ಹಿರೇಮಠ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

ಶಸ್ತ್ರಚಿಕಿತ್ಸೆ ನಿಮಿತ್ತ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕ, ಶಸ್ತ್ರಚಿಕಿತ್ಸೆ ನಡೆಸುವ ಮುನ್ನವೇ ಮೃತಪಟ್ಟಿದ್ದಾನೆ.

ದೀಪಾವಳಿ ಹಬ್ಬದಂದೇ ಬಾಲಕ ಬಾರದ ಲೋಕಕ್ಕೆ ಪಯಣಿಸಿದ್ದಾನೆ. ಹುಬ್ಬಳ್ಳಿಯ ನೇಕಾರ ನಗರದ ನಿವಾಸಿ ಮೃತ್ಯುಂಜಯ ಹಿರೇಮಠ ಅವರ ಪುತ್ರನಾಗಿದ್ದ ವಿಜಯ ಹಾವೇರಿಯ ಜಿಲ್ಲೆ ಹಾನಗಲ್ ನಲ್ಲಿನ ಛಾತ್ರಾಲಯ ಖಾಸಗಿ ಹಾಸ್ಟೆಲ್ ನಲ್ಲಿ ಸೇರಿಸಲಾಗಿತ್ತು. ಬಾಲಕ ಹಾಸಿಗೆಯಲ್ಲಿ ಮೂತ್ರ ಮಾಡಿದ್ದನೆಂಬ ಕಾರಣಕ್ಕೆ ಅಲ್ಲಿನ ವಾರ್ಡನ್ ಶ್ರವಣಕುಮಾರ್ ಬಾಲಕನ ಹೊಟ್ಟೆಗೆ ಒದ್ದು ತೀವ್ರವಾಗಿ ಹಲ್ಲೆ ನಡೆಸಿದ್ದ. ಹಲ್ಲೆಯಿಂದಾಗಿ ಬಾಲಕನ ಜೀರ್ಣಾಂಗ ವ್ಯವಸ್ಥೆ ಏರುಪೇರಾಗಿತ್ತು. 

ಬಾಲಕನನ್ನು ಕಳೆದೊಂದು ತಿಂಗಳಿನಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿತ್ತು. ಆದರೆ ಆರೋಗ್ಯ ಚೇತರಿಸಿಕೊಳ್ಲದ ಕಾರಣ ಬೆಂಗಳೂರಿಗೆ ಕರೆತರಲಾಗಿತ್ತು. ಅಲ್ಲಿ ವಾಣಿ ವಿಲಾಸ್ ಆಸ್ಪತ್ರೆಗೆ ದಾಖಲಿಸಿಚಿಕಿತ್ಸೆ ಒದಗಿಸಲಾಗಿತ್ತು. ಕಳೆದ ಎರಡು ವಾರಗಳಿಂದ ಬಾಲಕ ಇದೇ ಆಸ್ಪತ್ರೆಯಲ್ಲಿದ್ದನಾದರೂ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಶಸ್ತ್ರಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದರೆಂದು ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೋಲೀಸರು ವಾರ್ಡನ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಹಾಸ್ಟೆಲ್ ಸಿಬ್ಬಂದಿ ಒಮ್ಮೆಯೂ ನೋಡಲು ಆಗಮಿಸಿಲ್ಲ ಎಂದು ಬಾಲಕನ ಪೋಷಕರು ಅಳಲು ತೋಡಿಕೊಂಡಿದ್ದಾರೆ.

SCROLL FOR NEXT