ಬೆಂಗಳೂರು: ಬೆಂಗಳೂರಿನ ನಿರಾಶ್ರಿತರ ಕೇಂದ್ರದಲ್ಲಿಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ನಿರಾಶ್ರಿತರೊಂದಿಗೆ ಸಿಹಿ ಹಂಚುವ ಮೂಲಕ ಸೋಮವಾರ ದೀಪಾವಳಿ ಹಬ್ಬವನ್ನು ಆಚರಿಸಿದರು.
ನಂತರ ಮಾತನಾಡಿದ ಅವರು, ಪ್ರತಿ ವರ್ಷ ಕುಟುಂಬದ ಸದಸ್ಯರೊಂದಿಗೆ ಹಬ್ಬ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ನಿರಾಶ್ರಿತರು ಒಂಟಿಯಾಗಿದ್ದಾರೆ. ಅವರೊಂದಿಗೆ ಹಬ್ಬ ಆಚರಿಸಿ ಅವರ ಅಹವಾಲುಗಳನ್ನು ಆಲಿಸಿ, ಪರಿಹರಿಸುವ ಹಿನ್ನೆಲೆಯಲ್ಲಿ ಈ ಕೇಂದ್ರದಲ್ಲಿ ನಿರಾಶ್ರಿತರೊಂದಿಗೆ ಹಬ್ಬ ಆಚರಿಸಿದೆ ಎಂದು ತಿಳಿಸಿದರು.
ಭಿಕ್ಷಾಟನೆ ಒಂದು ಸಾಮಾಜಿಕ ಪಿಡುಗಾಗಿದ್ದು, ಸಮಾಜದ ಕಟ್ಟ ಕಡೆಯ ಮನುಷ್ಯರಿಗೆ, ಆರೈಕೆ ಮಾಡಲು ಯಾರೂ ಇಲ್ಲದ ಸಂದರ್ಭದಲ್ಲಿ ಈ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಿ, ಆರೈಕೆ ಮಾಡಲಾಗುತ್ತಿದೆ. ಪ್ರಸ್ತುತವಾಗಿ ಈ ಕೇಂದ್ರದಲ್ಲಿ ಒಟ್ಟು 754 ನಿರಾಶ್ರಿತರಿದ್ದಾರೆ. ರಾಜ್ಯದ 14 ನಿರಾಶ್ರಿತರ ಕೇಂದ್ರಗಳಲ್ಲಿ 1250 ನಿರಾಶ್ರಿತರಿದ್ದಾರೆ. ಈ ಕೇಂದ್ರದಲ್ಲಿ ಕೃಷಿ, ಹೈನುಗಾರಿಕೆ, ವಿವಿಧ ತರಬೇತಿ ನೀಡಲಾಗುತ್ತಿದ್ದು, ಉದ್ಯೋಗಕ್ಕೆ ಹೋಗುವವರಿಗೆ ನೆರವು ನೀಡಲಾಗುವುದು. ಈ ಕೇಂದ್ರದಲ್ಲಿ ಕೆಲಸ ಮಾಡುವ ನಿರಾಶ್ರಿತರಿಗೆ ಬ್ಯಾಂಕ್ ಖಾತೆಯನ್ನು ತೆರೆಸಿ, ನವೆಂಬರ್ ತಿಂಗಳಿನಿಂದ ಕೆಲಸಮಾಡಿದ ದಿನ 75 ರೂ. ಅನ್ನು ಅವರ ಖಾತೆಗೆ ಜಮಾ ಮಾಡಲಾಗುವುದು. ಈ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗಿದೆ ಎಂದರು.
ದೀಪಾವಳಿಯ ಪ್ರಯುಕ್ತ ಉಪಮುಖ್ಯಮಂತ್ರಿ ಕಾರಜೋಳ ಸುಮನಹಳ್ಳಿಯ ಭಿಕ್ಷುಕರ ಕಾಲೋನಿಗೆ ಭೇಟಿ ನೀಡಿ ಅಲ್ಲಿನ ನಿರಾಶ್ರಿತರೊಡನೆ ಹಬ್ಬದ ಆಚರಣೆ ಮಾಡಿದ್ದಾರೆ.