ರಾಜ್ಯ

ಹಕ್ಕಿ ಜ್ವರದ ಭೀತಿ; ಪಕ್ಷಿಧಾಮ, ಕೆರೆಗಳಲ್ಲಿ ಹೈ ಅಲರ್ಟ್

Srinivas Rao BV

ಮೈಸೂರು: ರಾಜ್ಯದ ಕೆಲ ಪಕ್ಷಿಧಾಮ ಹಾಗೂ ಕೆರೆಗಳಲ್ಲಿ ಅಪರೂಪದ ಹಕ್ಕಿಗಳು ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಅರಣ್ಯ ಇಲಾಖೆ ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು, ಲಿಂಗಾಂಬುಧಿ ಕೆರೆ ಹಾಗೂ ಕುಕ್ಕರಹಳ್ಳಿ ಕೆರೆಯಲ್ಲಿ ಏವಿಯನ್ ಇನ್ ಫ್ಲ್ಯೂಯೆನ್ಜಾ ಅಥವಾ ಹಕ್ಕಿ ಜ್ವರದ ವಿರುದ್ಧ ಹೈಅಲರ್ಟ್ ಘೋಷಿಸಿದೆ. 

ಸೋಮವಾರ ಮೈಸೂರು ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ಮತ್ತೊಂದು ಸ್ಪಾಟ್ –ಬಿಲ್ಡ್ ಪೆಲಿಕನ್ (ನೀರು ಹಕ್ಕಿ) ಮೃತಪಟ್ಟ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಮೈಸೂರು ವಿಭಾಗದ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ ಕೆ.ಸಿ.ಪ್ರಶಾಂತ್ ತಿಳಿಸಿದ್ದಾರೆ.

ಈಗಲೇ ಹಕ್ಕಿಯ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ತೀರ್ಮಾನಿಸಲಾಗದು. ಆದರೆ, ನಾವು ಯಾವುದೇ ಅವಘಡಗಳಿಗೆ ಅವಕಾಶ ನೀಡುವುದಿಲ್ಲ. ರಂಗನತಿಟ್ಟು ಪಕ್ಷಿಧಾಮ, ಕೊಕ್ಕರೆ ಬೆಳ್ಳೂರು ಮತ್ತು ಲಿಂಗಾಂಬುಧಿ ಕೆರೆಗಳ ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಹಕ್ಕಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವುಗಳ ಬಾಯಿಯಿಂದ ದ್ರವ ರೂಪದ ವಸ್ತು ಹೊರಬರುತ್ತಿದೆಯೇ ಎಂಬುದರ ತಪಾಸಣೆ ನಡಸುವಂತೆ ಸೂಚಿಸಿದ್ದೆವೆ ಎಂದು ಪ್ರಶಾಂತ್  ಮಾಹಿತಿ ನೀಡಿದ್ದಾರೆ. 

ಕಳೆದ ವರ್ಷ ಕುಕ್ಕರಹಳ್ಳಿ ಕೆರೆಯಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಎರಡು ಪೆಲಿಕನ್ ಗಳು ಮೃತಪಟ್ಟಿದ್ದವು. ಇದೇ ಭೀತಿಯಿಂದ 2017ರ ಜನವರಿ ತಿಂಗಳಲ್ಲಿ ಮೈಸೂರು ಮೃಗಾಲಯವನ್ನು ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಮೃತಪಟ್ಟ ಹಕ್ಕಿಯ ಮಾದರಿಯನ್ನು ಹೆಬ್ಬಾಳದ ಪ್ರಾಣಿ ಆರೋಗ್ಯ ಕೇಂದ್ರದ ದಕ್ಷಿಣ ಪ್ರದೇಶದ ರೋಗಗಳ ತಪಾಸಣಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಕ್ಕಿಯ ಮೃತದೇಹವನ್ನು ಥರ್ಮಕೋಲ್ ನಲ್ಲಿ ಸುತ್ತಿ ಬೆಂಗಳೂರಿಗೆ ರವಾನಿಸಲಾಗಿತ್ತು.

SCROLL FOR NEXT