ರಾಜ್ಯ

ಮಂಡ್ಯ: 100 ರು. ಕೂಲಿ ಬಾಕಿ ನೀಡಿಲ್ಲವೆಂದು ಆಳುಗಳಿಂದ ರೈತನ ಬರ್ಬರ ಹತ್ಯೆ!

Raghavendra Adiga

ಮಂಡ್ಯ: ಕೇವಲ 100 ರು. ಕೂಲಿ ಬಾಕಿ ನೀಡಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಆಳುಗಳೇ ರೈತನೊಬ್ಬನ ಬರ್ಬರ ಕೊಲೆ ಮಾಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಕೋಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಟಹಳ್ಳಿ ಗ್ರಾಮದ ಬಸವರಾಜು (40) ಎಂಬಾತ ಮೃತಪಟ್ಟ ರೈತನಾಗಿದ್ದು ಕೂಲಿ ಬಾಕಿ ನೀಡುವ ವಿಚಾರದಲ್ಲಿ ಆಳುಗಳ ಃಆಗೂ ಬಸವರಾಜು ನಡುವೆ ಗಲಾಟೆಯಾಗಿ ಆಳುಗಳಾದ ಶಿವು,ನಾಗರಾಜು ಮತ್ತು ಗವಿರಂಗೇಗೌಡ ಬಸವರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ರೈತ ಬಸವರಾಜು ತನ್ನ ಗದ್ದೆಯಲ್ಲಿ ಕೆಲಸ ಮಾಡುವ ಆಳುಗಳಿಗೆ 500 ರು. ಕೂಲಿ ನೀಡುವುದಾಗಿ ಹೇಳಿದ್ದು ಅದರಲ್ಲಿ 400 ರು. ನೀಡಿದ್ದಾನೆ. ಮತ್ತೆ ಬಾಕಿ 100 ಸಂಜೆ ನೀಡುವುದಾಗಿ ಹೇಳಿದ್ದಾನೆ. ಆದರೆ ಸಂಜೆ ವೇಳೆ ಬಾಕಿ ಮೊತ್ತಕ್ಕಾಗಿ ಬಸವರಾಜು ಹಾಗೂ ಆಳುಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಆಳುಗಳು ಬಸವರಾಜು ಮೇಲೆ ಹಲ್ಲೆ ಮಾಡಿದ್ದು ಪಕ್ಕದ ಲಾರಿಯಲ್ಲಿದ್ದ ಕಬ್ಬಿನ ಜಲ್ಲೆಯಿಂದ ಮಾರಣಾಂತಿಕವಾಗಿ ಹೊಡೆದು ಗಾಯಗೊಳಿಸಿದ್ದಾರೆ. 

ಹಲ್ಲೆಯಿಂದ ಗಾಯಗೊಂಡಿದ್ದ ಬಸವರಾಜುವನ್ನು ಕೂಡಲೇ ಗ್ರಾಮನ್ಸ್ಥರು ಕಿಕ್ಕೇರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಘಟನೆ ನಂತರ ಆರೋಪಿಗಳು ಪರಾರಿಯಾಗಿದ್ದು ಕಿಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

SCROLL FOR NEXT