ಬೆಂಗಳೂರು: ಒಂದು ವಾರದೊಳಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ನೋಟಿಸ್ ಜಾರಿ ಮಾಡಿದೆ.
ಸದಾಶಿವನಗರದ ಎರಡನೇ ಹಂತದ ಮನೆ ಸಂಖ್ಯೆ 94/ಎ ರಾಜಮಹಲ್ ವಿಲಾಸ್ ಮನೆಯನ್ನು ಈ ಹಿಂದೆ ಮೈತ್ರಿ ಸರ್ಕಾರದ ಮೊದಲ ಅವಧಿಯಲ್ಲಿ ಗೃಹ ಸಚಿವರಾಗಿದ್ದ ಡಿಸಿಎಂ ಪರಮೇಶ್ವರ್ಗೆ ಹಂಚಿಕೆ ಮಾಡಲಾಗಿತ್ತು. ಪ್ರಸ್ತುತ ಈ ಮನೆಯನ್ನು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಯಿ ಅವರ ಕಚೇರಿ ಉಪಯೋಗಕ್ಕೆ ಹಂಚಿಕೆ ಮಾಡಲಾಗಿದ್ದು, ನಿವಾಸವನ್ನು ಕೂಡಲೇ ಖಾಲಿ ಮಾಡುವಂತೆ ಪರಮೇಶ್ವರ್ ಅವರಿಗೆ ಸೂಚಿಸಲಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗಿ ಒಂದೂವರೆ ತಿಂಗಳು ಕಳೆದಿದ್ದರೂ, ಪರಮೇಶ್ವರ್ ಮಾತ್ರ ಇನ್ನೂ ಮನೆ ಖಾಲಿ ಮಾಡಿಲ್ಲ. ಈ ಹಿನ್ನೆಲೆ ಒಂದುವಾರದೊಳಗೆ ಮನೆಯನ್ನು ಖಾಲಿ ಮಾಡುವಂತೆ ಬಿಡಿಎ ಸೂಚನೆ ನೀಡಿದೆ.
ಜೊತೆಗೆ ವಿದ್ಯುಚ್ಛತ್ತಿ ವೆಚ್ಚ ಹಾಗೂ ನೀರಿನ ವೆಚ್ಚವನ್ನು ಸಂಬಂಧಿಸಿದ ಇಲಾಖೆಗೆ ಪಾವತಿಸಿದ ಬಿಲ್ಲುಗಳ ಜೊತೆಗೆ ಪ್ರಾಧಿಕಾರದ ಸುಪರ್ದಿಗೆ ವಹಿಸುವಂತೆ ನೊಟೀಸಿನಲ್ಲಿ ಉಲ್ಲೇಖ ಮಾಡಲಾಗಿದೆ.