ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದುಬಾರಿ ದಂಡ ಇಳಿಕೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸೋಮವಾರ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ವಾಹನ ಚಾಲಕರ ನಿದ್ರೆಗೆಡಿಸಿರುವ ದುಬಾರಿ ಟ್ರಾಫಿಕ್ ದಂಡಕ್ಕೆ ಸೋಮವಾರದಿಂದಲೇ ಬ್ರೇಕ್ ಬೀಳುವ ನಿರೀಕ್ಷೆ ಇದ್ದು. ಬಿ. ಎಸ್. ಯಡಿಯೂರಪ್ಪ ಸಾರಥ್ಯದ ರಾಜ್ಯ ಬಿಜೆಪಿ ಸರ್ಕಾರ, ದುಬಾರಿ ದಂಡವನ್ನು ಕಡಿತಗೊಳಿಸಲು ಈಗಾಗಲೇ ಸಮ್ಮತಿ ಸೂಚಿಸಿದೆ.
ನೂತನ ಮೋಟಾರು ವಾಹನ ಕಾಯ್ದೆಗೆ ಬದಲಾವಣೆ ತರುವ ಮೂಲಕ, ದುಬಾರಿ ದಂಡಕ್ಕೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಈ ಕುರಿತ ಅಧಿಕೃತ ಪ್ರಕಟಣೆ ಸೋಮವಾರ ಹೊರಡಿಸುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಗುಜರಾತ್, ಮಹಾರಾಷ್ಟ್ರ ಮೊದಲಾದ ರಾಜ್ಯಗಳು ನೂತನ ದಂಡ ಮೊತ್ತ ಪರಿಷ್ಕರಿಸಿರುವುದರ ವಿವರ ಪಡೆದುಕೊಂಡು ರಾಜ್ಯದಲ್ಲೂ ದಂಡ ಪರಿಷ್ಕರಿಸಲಾಗಿದೆ. ಈಗಾಗಲೇ ಪರಿಷ್ಕೃತ ದಂಡದ ಪಟ್ಟಿಯನ್ನೂ ಸರ್ಕಾರಕ್ಕೆ ಸಲ್ಲಿಸಿರುವುದರಿಂದ ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.
ಜನಸಾಮಾನ್ಯರಿಗೆ ದುಬಾರಿ ದಂಡದಿಂದ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ದಂಡ ಇಳಿಸುತ್ತೇವೆ ಎಂದು ಸೆಪ್ಟೆಂಬರ್ 11ರಂದು ಸಿಎಂ ಯಡಿಯೂರಪ್ಪ ಪ್ರಕಟಿಸಿದ್ದರು.
ಗುಜರಾತ್ ಸರ್ಕಾರ ಹೊರಡಿಸಿರುವ ಆದೇಶವನ್ನು ತರಿಸಿಕೊಂಡು ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಕುಡಿದು ವಾಹನ ಚಾಲನೆ, ಡಿಎಲ್ ಇಲ್ಲದೆ ವಾಹನ ಚಾಲನೆ, ವಾಯು ಮಾಲಿನ್ಯ ಸೇರಿದಂತೆ ಕೆಲವೊಂದು ಗಂಭೀರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಹಾಗೇ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದ್ದರೂ ಯಾವುದೂ ಸ್ಪಷ್ಟವಾಗಿಲ್ಲ. ಅಧಿಕೃತ ಆದೇಶ ಹೊರಬಿದ್ದ ಬಳಿಕವೇ ಸ್ಪಷ್ಟಚಿತ್ರಣ ಲಭಿಸಲಿದೆ