ರಾಜ್ಯ

ಜನರಿಗೆ ನೆಲೆಸಲು ಮನೆಯೇ ಇಲ್ಲ, ಹೀಗಿರುವಾಗ ಉಪ ಚುನಾವಣೆ ಏಕೆ?: ಬೆಳಗಾವಿ ಜಿಲ್ಲೆ ಜನತೆಯ ಪ್ರಶ್ನೆ 

Sumana Upadhyaya

ಬೆಳಗಾವಿ: ಕರ್ನಾಟಕ ರಾಜಕೀಯದಲ್ಲಿ ಇದೀಗ ಉಪ ಚುನಾವಣೆ ಪರ್ವ. ಇದರ ಮಧ್ಯೆ ಪ್ರವಾಹಕ್ಕೆ ತೀವ್ರ ನಲುಗಿ ಹೋಗಿರುವ ಉತ್ತರ ಕರ್ನಾಟಕ ಭಾಗದ ಜನತೆ ಉಪ ಚುನಾವಣೆ ನಡೆಸಲು ಮುಂದಾಗಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿದ್ದಾರೆ. 


ಬೆಳಗಾವಿಯ ಅಥಣಿ, ಗೋಕಾಕ್, ಕಾಗವಾಡ ಮತ್ತ ಯೆಲ್ಲಾಪರ ತಾಲ್ಲೂಕುಗಳು ಈ ಬಾರಿಯ ನೆರೆ ಪ್ರವಾಹಕ್ಕೆ ತೀವ್ರ ಹಾನಿಗೀಡಾಗಿ ಹಲವರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಜನರು ಜೀವನ ನಡೆಸಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ಉಪ ಚುನಾವಣೆ ಘೋಷಿಸಿರುವಾಗ ಸಹಜವಾಗಿ ಅಧಿಕಾರಿಗಳ ಗಮನ ಪರಿಹಾರ ಕಾರ್ಯ, ಜನರಿಗೆ ಸಹಾಯ ಮಾಡುವುದು ಬಿಟ್ಟು ಚುನಾವಣೆಯತ್ತ ಹೋಗುತ್ತದೆ. ಜನರು ಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಈ ರೀತಿ ಚುನಾವಣೆ ನಡೆಸುವುದು ಸರಿಯಲ್ಲ, ನ್ಯಾಯವಲ್ಲ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಪ್ರಕಾಶ್ ನಾಯಕ್, ಸರ್ಕಾರದ ಇಲಾಖೆಗಳು, ಸಚಿವರುಗಳು, ಅಧಿಕಾರಿಗಳು ಪರಿಹಾರ ಕಾರ್ಯಗಳ ಬಗ್ಗೆ ಗಮನ ಹರಿಸಬೇಕಾದಾಗ ಚುನಾವಣಾ ಆಯೋಗ ಅವರ ಗಮನವನ್ನು ಬೇರೆಡೆಗೆ ಹರಿಸುತ್ತಿದೆ. ಪ್ರವಾಹಕ್ಕೆ ಹಲವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಗ್ರಾಮಗಳಿಂದ ಲಕ್ಷಾಂತರ ಮಂದಿಯನ್ನು ಸ್ಥಳಾಂತರಗೊಳಿಸಲಾಗಿತ್ತು. ಅವರೆಲ್ಲ ಈಗಷ್ಟೇ ವಾಪಸ್ ತಮ್ಮ ಪೂರ್ವ ಸ್ಥಳಕ್ಕೆ ಬಂದು ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಆಧಾರ್ ಕಾರ್ಡ್ ಆಗಲಿ, ಪ್ಯಾನ್ ಕಾರ್ಡು ಆಗಲಿ ಯಾವುದೂ ಇಲ್ಲ, ಹೇಗೆ ಮತದಾನ ಮಾಡುತ್ತಾರೆ, ಜನರು ಮತದಾನ ಮಾಡುವ ಪರಿಸ್ಥಿತಿಯಲ್ಲಿರುತ್ತಾರೆಯೇ ಎಂದು ಪ್ರಶ್ನಿಸಿದರು.


ನಾಯಕ್ ಹೇಳುವ ಪ್ರಕಾರ ಕಾಗವಾಡ, ಅಥಣಿ, ಗೋಕಾಕ್, ಯೆಲ್ಲಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದು ಸರಿಯಲ್ಲ, ಜನರು ತಮ್ಮ ಜೀವನದ ಬಗ್ಗೆ ಆತಂಕದಲ್ಲಿದ್ದಾರೆಯೇ ಹೊರತು ಅವರಿಗೆ ಈ ಸಂದರ್ಭದಲ್ಲಿ ಚುನಾವಣೆ ಮುಖ್ಯವಾಗುವುದಿಲ್ಲ ಎಂದರು. 


ಗೋಕಾಕ್ ನಿವಾಸಿ ಅಖಿಲ್ ಯಾದವ್, ಹಲವು ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದಾರೆ. ಅಂತವರಿಗೆ ಕೊಡುಗೆಗಳಿಂದ ಬಂದ ಹಣದ ಮೂಲಕ ನೆರವು ನೀಡಲು ಪ್ರಯತ್ನಿಸುತ್ತಿದ್ದೇವೆ. ಕೆಲ ಸರ್ಕಾರೇತರ ಸಂಘಟನೆಗಳು, ಉದ್ಯಮಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಕಾಳಜಿ ತೋರಿಸಿ ನೆರವಿಗೆ ಬರುತ್ತಿದ್ದಾರೆ. ಇಂತಹ ಸಮಯದಲ್ಲಿ ಉಪ ಚುನಾವಣೆ ನಡೆಸಿ ಸರ್ಕಾರದ ಅಧಿಕಾರಿಗಳು, ಆಡಳಿತ ವರ್ಗದವರ ಗಮನ ಬೇರೆಡೆಗೆ ಸೆಳೆಯುವುದು ಸರಿಯಲ್ಲ ಎನ್ನುತ್ತಾರೆ.

SCROLL FOR NEXT