ರಾಜ್ಯ

ದಸರಾ ಉತ್ಸವ; ಕೇಂದ್ರ ಸಚಿವ ಸದಾನಂದಗೌಡರನ್ನು ತಡೆದ ಭದ್ರತಾ ಸಿಬ್ಬಂದಿ

Manjula VN

ಮೈಸೂರು: ಮೈಸೂರಿನ ಜಗತ್ ವಿಖ್ಯಾತ ದಸರಾ ಉತ್ಸವಕ್ಕೆ ಆಗಮಿಸಿದ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ.ಸದಾನಂದಗೌಡ ಅವರು ಮುಜುಗರಕ್ಕೀಡಾಗುವ ಸನ್ನಿವೇಶ ಎದುರಾಯಿತು.

ಭಾನುವಾರ ಉದ್ಘಾಟನಾ ಕಾರ್ಯಕ್ರಮಕ್ಕೆ ಸದಾನಂದಗೌಡ ಅವರು ಸ್ವಲ್ಪ ತಡವಾಗಿ ಆಗಮಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಗಲೇ ವೇದಿಕೆಯಲ್ಲಿದ್ದರು. ಆದ್ದರಿಂದ ತರಾತುರಿಯಲ್ಲಿ ವೇದಿಕೆಯತ್ತ ಸಾಗುತ್ತಿದ್ದ ಸಚಿವರನ್ನು ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ನಂತರ, ಪೊಲೀಸ್ ಅಧಿಕಾರಿಗಳು ಅವರನ್ನು ಗಮನಿಸಿ ವೇದಿಕೆಗೆ ಕರೆದೊಯ್ದರಾದರೂ, ಘಟನೆಯಿಂದ ಬೇಸರಗೊಂಡ ಸದಾನಂದ ಗೌಡ ಅವರು ಕಾರ್ಯಕ್ರಮದ ಮಧ್ಯದಲ್ಲೇ ತೆರಳಿದರು ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರು ದಸರಾ ಉತ್ಸವವನ್ನು ಉದ್ಘಾಟಿಸಿದರು.

ಮುಂದಿನ ಒಂಬತ್ತು ದಿನಗಳ ಕಾಲ ನಡೆಯಲಿರುವ ವಿಜೃಂಬಣೆಯ ಜಂಬೂ ಸವಾರಿ ವಿಜಯದಶಮಿಯಂದು ಕೊನೆಗೊಳ್ಳಲಿದ್ದು, ಇದಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಲಿದ್ದಾರೆ.

SCROLL FOR NEXT