ರಾಜ್ಯ

ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಕ್ರಮ; ರೈತರಿಗೆ ಗ್ರೀನ್ ಪಾಸ್ ವಿತರಣೆ: ಸಚಿವ ಬಿ.ಸಿ.ಪಾಟೀಲ್

Manjula VN

ಮೈಸೂರು: ಕೃಷಿ ಚಟುವಟಿಕೆ‌ ಮೇಲೆ ನಕಾರಾತ್ಮಕ ಪರಿಣಾಮ ಬೀರದಂತೆ‌ ನೋಡಿಕೊಳ್ಳುವ ಹಿನ್ನೆಲೆಯಲ್ಲಿ ಅತ್ಯವಶ್ಯಕ ಇರುವವರಿಗೆ ಗ್ರೀನ್ ಪಾಸ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.‌ಪಾಟೀಲ್ ತಿಳಿಸಿದ್ದಾರೆ.

ಮೈಸೂರು - ಚಾಮರಾಜನಗರ ಜಿಲ್ಲೆಗಳಲ್ಲಿ ಕೃಷಿ ಪ್ರಗತಿ ಪರಿಶೀಲನಾ‌ ಸಭೆ ನಡೆಸಿದ‌ ನಂತರ ಅವರು‌ ಸುದ್ದಿಗಾರರೊಂದಿಗೆ ಮಾತನಾಡಿದರು.

ಪೆಟ್ರೋಲ್ ಬಂಕ್ ಗಳಲ್ಲಿ‌‌ ಕೃಷಿ ವಲಯದ ಟ್ರ್ಯಾಕ್ಟರುಗಳಿಗೆ ಡೀಸೆಲ್ ಕೊರತೆಯಾಗಿದೆ. ಕೃಷಿ ಯಂತ್ರೋಕರಣ ದುರಸ್ತಿ ಮಾಡುವ ಮೆಕ್ಯಾನಿಕ್‍ಗಳ‌ ಓಡಾಟಕ್ಕೆ, ಅವರುಗಳು ಅಂಗಡಿ ತೆರೆಯುವುದಕ್ಕೆ ನಿರ್ಬಂಧವಿದೆ ಎಂಬ ದೂರುಗಳು ಬಂದಿವೆ.‌ ಅವುಗಳನ್ನು ಸರಿಪಡಿಸಲಾಗುವುದು. ನಗರಗಳಲ್ಲಿ‌ ನೆಲೆಸಿ ಹಳ್ಳಿಗಳಲ್ಲಿರುವ ತಮ್ಮತಮ್ಮ ಹೊಲಗಳಿಗೆ ಹೋಗುವ ರೈತರಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸದಂತೆ ನೋಡಿಕೊಳ್ಳಲಾಗುವುದು.‌ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕೃಷಿ ಯಂತ್ರೋಪಕರಣ ದುರಸ್ತಿ ಮಾಡುತ್ತೇವೆಂದು‌ ಕೆಲವು ಕಂಪನಿಗಳವರು ಮುಂದೆ‌ ಬಂದಿದ್ದಾರೆ. ಈ ಕಂಪನಿಗಳ ಪ್ರತಿನಿಧಿಗಳಿಗೆ ಗ್ರೀನ್ ಪಾಸ್ ವಿತರಿಸಲಾಗುವುದು.‌ ಈ ಕಾರ್ಯವನ್ನು ಕೃಷಿ ಅಧಿಕಾರಿ, ಕೃಷಿ ಸಹಾಯಕ ನಿರ್ದೇಶಕರು ಮಾಡುತ್ತಾರೆ ಎಂದು ಭರವಸೆ ನೀಡಿದರು.

ಮೈಸೂರು - ಚಾಮರಾಜನಗರ ಜಿಲ್ಲೆಗಳಲ್ಲಿ‌ ಮುಂಗಾರು ಹಂಗಾಮು ಚಟುವಟಿಕೆಗೆ ಅಗತ್ಯವಾದ ಬಿತ್ತನೆಬೀಜ‌- ರಸಗೊಬ್ಬರ - ಕೀಟನಾಶಕಗಳಿಗೆ ಯಾವುದೇ ಕೊರತೆಯೂ ಇಲ್ಲ.‌ ರೈತರು ಆತಂಕಪಡಬೇಕಾದ ಅಗತ್ಯವಿಲ್ಲ.‌ ಈಗಾಗಲೇ ಎಲ್ಲ‌ ರೈತ ಸಂಪರ್ಕ‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರೈತರಿಗೆ ಅವಶ್ಯಕವಾದ ಎಲ್ಲ‌‌ ನೆರವು ನೀಡಲು ಸನ್ನದ್ಧವಾಗಿವೆ ಎಂದು ಸ್ಪಷ್ಟಪಡಿಸಿದರು.

ಚಾಮರಾಜನಗರ ಜಿಲ್ಲೆಯ ರೈತರು ನೆರೆಯ ಕೇರಳದ ಕೃಷಿ ಮಾರುಕಟ್ಟೆಗಳಿಗೂ ತಮ್ಮ ಕೃಷಿ ಉತ್ಪನ್ನ ತೆಗೆದುಕೊಂಡು ಹೋಗುತ್ತಿದ್ದರು.‌ಆದರೆ ಕೇರಳದಲ್ಲಿ ಕೊರೊನಾ ಸೋಂಕಿತರ ಪ್ತಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ಅಂತರಾಜ್ಯ ಗಡಿ ಬಂದ್ ಮಾಡಲಾಗಿದೆ. ಇದರಿಂದ ರೈತರಿಗೆ ಅನಾನುಕೂಲವಾಗಿದ್ದರೂ ಪರಿಸ್ಥಿತಿ ಹಿನ್ನೆಲೆಯಲ್ಲಿ ಅವರು ಸಹಕಾರ ನೀಡಬೇಕು. ಗಡಿ ನಿರ್ಬಂಧ ತೆರವು ಯಾವಾಗ ಆಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು‌ ಸ್ಪಷ್ಟಪಡಿಸಿದರು

SCROLL FOR NEXT