ರಾಜ್ಯ

ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಎಂ.ಬಿ.ದೇಸಾಯಿ ನಿಧನ

Srinivasamurthy VN

ಬೆಳಗಾವಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ಎಂ.ಬಿ.ದೇಸಾಯಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ವಯೋಸಹಜ ಕಾಯಿಲೆಯಿಂದಾಗಿ ನಿಲಜಿಯ ಗೋಕುಲ ನಗರದಲ್ಲಿರುವ ಸ್ವಗೃಹದಲ್ಲಿ ಅವರು ಇಂದು ಬೆಳಗ್ಗೆ 10.30ಕ್ಕೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬೆಳಗಾವಿಯಲ್ಲಿ ಲೋಕ ದರ್ಶನ ಕನ್ನಡ ಪತ್ರಿಕೆ ಆರಂಭಿಸಿ ಕನ್ನಡದ ಕಂಪು ಮೂಡಿಸಿದ್ದ ಅವರಿಗೆ ಕರ್ನಾಟಕ  ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು.

ಮಹಾತ್ಮ ಗಾಂಧೀಜಿಯವರ ಕರೆಯ ಮೇರೆಗೆ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದ ದೇಸಾಯಿಯವರು, 1956 ರ ಕಾಲದಲ್ಲಿ ವಾರಪತ್ರಿಕೆ ಆರಂಭಿಸಿ ನಂತರ 1963 ರಲ್ಲಿ ಲೋಕದರ್ಶನ ದಿನಪತ್ರಿಕೆ ಆರಂಭಿಸಿದರು. 1986 ರಲ್ಲಿ ಜನವರಿಯಿಂದ ಜೂನ್‌ವರೆಗೆ ದುಷ್ಕರ್ಮಿಗಳು 6 ಸಲ  ಪತ್ರಿಕಾ ಕಾರ್ಯಾಲಯಕ್ಕೆ ಬೆಂಕಿ ಇಟ್ಟರೂ ಅದರಿಂದ ಎದೆಗುಂದದೆ ನಿರಂತರ ಪತ್ರಿಕೆ ನಡೆಸಿ, ಪ್ರಸರಣವನ್ನು ವಿಸ್ತರಿಸಿದರು. 

ದೇಸಾಯಿಯವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಹಿರಿಯ ಪತ್ರಿಕೋದ್ಯಮಿ ಶ್ರೀ ಮೋಹನ್. ಬಿ ದೇಸಾಯಿ ಅವರ ನಿಧನವು ಉತ್ತರ ಕರ್ನಾಟಕ ಭಾಗದ ಮಾಧ್ಯಮ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಹಿರಿಯ ಸ್ವಾತಂತ್ರ್ಯ  ಹೋರಾಟಗಾರರಾಗಿದ್ದ ದೇಸಾಯಿಯವರು ಲೋಕದರ್ಶನ ಪತ್ರಿಕೆಯನ್ನು ಪ್ರಾರಂಭಿಸಿ, ಅಭಿವೃದ್ಧಿಪರ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದ್ದರು. ಹಲವಾರು ರಾಜಕೀಯ ಸ್ಥಿತ್ಯಂತರದ ಸಂದರ್ಭದಲ್ಲಿ ನನಗೆ ವೈಯಕ್ತಿಕವಾಗಿ ಶ್ರೀ ದೇಸಾಯಿಯವರು ಮಾರ್ಗದರ್ಶನ ಮಾಡಿದ್ದರು. ಇವರ ಆತ್ಮಕ್ಕೆ  ಶಾಂತಿ ಸಿಗಲಿ ಮತ್ತು ಇವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಂತಾಪ ಸೂಚಿಸಿದ್ದಾರೆ.

SCROLL FOR NEXT