ರಾಜ್ಯ

ಒತ್ತಾಯಪೂರ್ವಕ ಬಾಲ್ಯವಿವಾಹ: 16 ವರ್ಷದ ಬಾಲಕಿ ಆತ್ಮಹತ್ಯೆ

Srinivas Rao BV

ತುಮಕೂರು: ತನ್ನನ್ನು ಒತ್ತಾಯಪೂರ್ವಕವಾಗಿ ಬಾಲ್ಯವಿವಾಹಕ್ಕೆ ಗುರಿಪಡಿಸಿದ್ದರಿಂದ ಬೇಸತ್ತು 16 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ತನ್ನ ಇಚ್ಛೆಗೆ ವಿರುದ್ಧವಾಗಿ ನಡೆದ ಬಾಲ್ಯವಿವಾಹವನ್ನು ವಿರೋಧಿಸಿ 16 ರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನು ಮುಚ್ಚಿಹಾಕುವುದಕ್ಕೆ ಸ್ವತಃ ಶಿರಾ ಪೊಲೀಸರೇ ಯತ್ನಿಸಿದ್ದರಾದರೂ ನಂತರದ ಬೆಳವಣಿಗೆಯಲ್ಲಿ ವಧು-ವರರಿಬ್ಬರ ಪೋಷಕರನ್ನು (4 ಆರೋಪಿಗಳು) ಬಂಧಿಸಿದ್ದಾರೆ. 

ಪ್ರಕರಣದ ಆರೋಪಿ ವರ ತಪ್ಪಿಸಿಕೊಂಡಿದ್ದಾನೆ, ಮೃತ ಬಾಲಕಿಯನ್ನು ಸುಧಾ ಎಂದು ಗುರುತಿಸಲಾಗಿದ್ದು, ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಈಕೆಯ ಬಾಲ್ಯವಿವಾಹವನ್ನು ಸಂಬಂಧಿಕರಾಗಿದ್ದ ಮಧು ಎಂಬಾತನೊಂದಿಗೆ ಮಾಡಲಾಗಿತ್ತು. ಇದನ್ನು ವಿರೋಧಿಸಿ ಯುವತಿ ನೇಣು ಬಿಗಿದುಕೊಂಡಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಬದುಕಿ ಉಳಿಯಲಿಲ್ಲ. 

ಆಕೆಯ ಪೋಷಕರಾದ ಹೊನ್ನೇಶ್-ಪುಷ್ಪಾ ಹಾಗೂ ಮಧು ಪೋಷಕರಾದ ವರದರಾಜು-ವನಜಾಕ್ಷಿಯನ್ನು ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದ್ದು ನ್ಯಾಯಾಂಗದ ವಶಕ್ಕೆ ನೀಡಲಾಗಿದೆ. ವಧು-ವರರಿಬ್ಬರ ಪೋಷಕರೂ ಬೆಂಗಳೂರು ನಿವಾಸಿಗಳಾಗಿದ್ದರು. ವಿವಾಹ ನಡೆದಾಗ ಬಾಲಕಿ ಸುಧಾ ಗ್ರಾಮದಲ್ಲಿದ್ದಳು. ಬಾಲ್ಯ ವಿವಾಹವನ್ನು ತಡೆಯಬೇಕಿದ್ದ ಸಂಬಂಧಪಟ್ಟ ಅಧಿಕಾರಿ ಹಿರಿಯೂರಿನಲ್ಲಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಈ ವಿವಾಹ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀಕ್ಷಕಿ ಸುರೇಖಾ ಥಾಕೆ ಪೊಲೀಸ್ ದೂರು ನೀಡಿದ್ದರ ಫಲಿತವಾಗಿ ಪ್ರಕರಣ ದಾಖಲಾಗಿದೆ. 

SCROLL FOR NEXT