ರಾಜ್ಯ

ವಿಧಾನಸಭೆ ಅಧಿವೇಶನ: ನೂತನ ಕಟ್ಟಡಕ್ಕಾಗಿ ಹುಡುಕಾಡುತ್ತಿದೆ ರಾಜ್ಯ ಸರ್ಕಾರ!

Manjula VN

ಬೆಂಗಳೂರು: ಸೆಪ್ಟಂಬರ್ ತಿಂಗಳಿನಲ್ಲಿ ವಿಧಾನಸಭೆ ಅಧಿವೇಶನ್ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ದೊಡ್ಡ ಸಭಾಂಗಣ ಅಥವಾ ಖಾಸಗಿ ಸ್ಥಳಗಳನ್ನು ಒಳಗೊಂಡಂತೆ ಸೂಕ್ತ ಸ್ಥಳಕ್ಕಾಗಿ ಹುಡುಕಾಟ ಆರಂಭಿಸಿದೆ ಎಂದು ತಿಳಿದುಬಂದಿದೆ. 

ಈ ವರೆಗೂ ವಿಧಾನಸೌಧದಲ್ಲಿಯೇ ಅಧಿವೇಶನವನ್ನು ನಡೆಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೋನಾ ಸಾಂಕ್ರಾಮಿಕ ರೋಗ ಇರುವುದರಿಂದ ಉಭಯ ಸದನಗಳಲ್ಲಿ ಸಾಮಾಜಿಕ ದೂರ ಕಾಪಾಡಿಕೊಳ್ಳುವ ಆಗತ್ಯವಿದೆ. ವಿಧಾನಸೌಧದ ಉಭಯ ಸದನಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಕರವಾಗಿದ್ದು, ಹೀಗಾಗಿ ಸರ್ಕಾರ ದೊಡ್ಡ ಸಭಾಂಗಣಕ್ಕಾಗಿ ಹುಡುಕಾಟ ಆರಂಭಿಸಿದೆ ಎನ್ನಲಾಗುತ್ತಿದೆ. 

ಅಧಿವೇಶನಕ್ಕೆ 224 ಶಾಸಕರು, 75 ಎಂಎಲ್ಸಿಗಳು, ಅಧಿಕಾರಿಗಳು ಮತ್ತು ಮಾಧ್ಯಮಗಳು ಸಿಬ್ಬಂದಿಗಳು ಹಾಜರಾಗುತ್ತಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕು ಪ್ರಕರಣಗಳು ತೀವ್ರ ಏರಿಕೆಯಾಗುತ್ತಲೇ ಇದ್ದು, ಈ ಸಂದರ್ಭದಲ್ಲಿ ಅಧಿವೇಶನ ನಡೆಸುವುದು ಸುರಕ್ಷಿತವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. 

2012ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧಕ್ಕೆ ಚಾಲನೆ ನೀಡಲಾಗಿತ್ತು. ಪ್ರತೀ ವರ್ಷ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನವನ್ನಷ್ಟೇ ನಡೆಸಲಾಗುತ್ತದೆ. ಉಳಿದ ಎಲ್ಲಾ ಅಧಿವೇಶನಗಳನ್ನೂ ವಿಧಾನಸೌಧದಲ್ಲಿಯೇ ನಡೆಸಲಾಗುತ್ತದೆ. 

ರಾಜ್ಯ ಸರ್ಕಾರದ ಮನವಿ ಮೇರೆಗೆ ವಿಧಾನಸಭೆ ಸ್ಪೀಕರ್ ಹಾಗೂ ವಿಧಾನಸಭೆ ಪರಿಷತ್ ಅಧ್ಯಕ್ಷರು ಅಧಿವೇಶವನ್ನು ಕೆಲವು ದಿನಗಳವರೆಗೆ ಕಡಿತಗೊಳಿಸಬೇಕಾಗಿ ಬಂದಿತ್ತು. ಸಂವಿಧಾನದ 174 (1) ನೇ ವಿಧಿ ಅನ್ವಯ, ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು ಎಂದು ತಿಳಿಸಿದೆ. ಆದ್ದರಿಂದ, ಸೆಪ್ಟೆಂಬರ್ ಅಂತ್ಯದ ಮೊದಲು ಅಧಿವೇಶನವನ್ನು ನಡೆಸುವುದು ರಾಜ್ಯ ಸರ್ಕಾರಕ್ಕೆ ಕಡ್ಡಾಯವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಅಧಿವೇಶನ ಕುರಿತು ಕಾನೂನು ಮತ್ತು ಸಂಸದೀಯ ಸಚಿವ ಜೆ ಸಿ ಮಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಮತ್ತು ಇತರ ವಿಧಾನಸಭಾ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಾಗಿದೆ. 

"ನಿಯಮಗಳ ಪ್ರಕಾರ, ಸೆಪ್ಟೆಂಬರ್ನಲ್ಲಿ ಅಧಿವೇಶನವನ್ನು ನಡೆಸಲೇಬೇಕಾಗಿದೆ, ನಾವು ಅದನ್ನು ಮುಂದೂಡಲು ಸಾಧ್ಯವಿಲ್ಲ. ಸಾರ್ವಜನಿಕ ಗ್ಯಾಲರಿಯನ್ನು ಬಳಸಬಹುದೇ ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಏನೇ ಆದರೂ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸಬೇಕಿದ್ದು, ದೊಡ್ಡ ಸ್ಥಳವೇ ಬೇಕಾಗುತ್ತದೆ. ಹೀಗಾಗಿ ದೊಡ್ಡ ಸಭಾಂಗಣಕ್ಕಾಗಿ ಹುಡುಕಾಟ ಆರಂಭಿಸಿದ್ದೇವೆಂದು ತಿಳಿಸಿದ್ದಾರೆ. 

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿಯವರು ಮಾತನಾಡಿ, ಆನ್'ಲೈನ್ ಅಧಿವೇಶನ ನಡೆಸುವಂತೆ ಸಾಕಷ್ಟು ಸಲಹೆಗಳು ಬರುತ್ತಿವೆ. ಇದಲ್ಲದೆ ಇನ್ನಿತರೆ ಆಯ್ಕೆಗಳ ಕುರಿತಂತೆಯೂ ಪರಿಶೀಲಿಸುತ್ತಿದ್ದೇವೆ. ವಿಧಾನಸೌಧದ ವಿಧಾನಸಭಾ ಗ್ಯಾಲರಿ ದೊಡ್ಡದಾಗಿದ್ದು, ಇಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಅಧಿವೇಶನ ನಡೆಸಲು ಸಾಧ್ಯವೇ ಎಂಬುದರ ಕುರಿತು ಚಿಂತನೆ ನಡೆಸುತ್ತಿದ್ದೇವೆ. ವಿಧಾನಪರಿಷತ್ ಗ್ಯಾಲರಿ ಚಿಕ್ಕದಾಗಿದ್ದು. ಈ ಬಗ್ಗೆ ಯಾವುದೇ ಚಿಂತನೆಗಳು ನಡೆಯುತ್ತಿಲ್ಲ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಸ್ಥಳ ಕುರಿತು ಚರ್ಚೆಗಳು ನಡೆದಿವೆ. ದೊಡ್ಡ ಸಭಾಂಗಣಕ್ಕಾಗಿ ಹುಡುಕಾಡುತ್ತಿದ್ದೇವೆಂದಿದ್ದಾರೆ. 

SCROLL FOR NEXT