ರಾಜ್ಯ

ಯೂಟೂಬ್ ಪ್ರೇರಣೆ: ಶೇಂಗಾ ಬೇರ್ಪಡಿಸಲು ಸಾಧನವಾಗಿ ಸೈಕಲ್ ಬಳಕೆ!

Srinivasamurthy VN

ಗಂಗಾವತಿ: ಬಿತ್ತನೆ ಮಾಡಿದ ಬೀಜಗಳ ಸಂರಕ್ಷಣೆ, ಬೆಳೆದ ಬೆಳೆಯ ಫಸಲನ್ನು ಬೇರ್ಪಡಿಸಲು ರೈತರು ನಿತ್ಯ ನಾನಾ ನವೀನ ದಾರಿಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ತಮಗೆ ತೋಚಿದ ಪರಿಕರಗಳನ್ನು ಬಳಸಿ ಸುಲಭವಾಗುವ ವಿಧಾನಗಳನ್ನು ಕಂಡು ಹಿಡಿದು ಜಾರಿಗೆ ತರುತ್ತಿರುತ್ತಾರೆ.

ಯೂ ಟ್ಯೂಬ್ನಲ್ಲಿ ನಾನಾ ಮಾದರಿಗಳನ್ನು ನೋಡಿಯೇ ಇಂತಹ ನೂತನ ಅವಿಷ್ಕಾರಕ್ಕೆ ಮುನ್ನುಡಿ ಬರೆದಿದ್ದಾನೆ ತಾಲ್ಲೂಕಿನ ವಿದ್ಯಾರ್ಥಿಯೊಬ್ಬ. ಇದೀಗ ಆತನ ಈ ಸಂಶೋಧನೆಗೆ ತಾಂತ್ರಿಕ ಚೌಕಟ್ಟಿನ ನೆರವು ದೊರೆತಲ್ಲಿ ನೂರಾರು ರೈತರಿಗೆ ವರವಾಗಬಹುದು. ಇಷ್ಟಕ್ಕೂ ಈ ಸ್ಟೋರಿ ಏನಂತಿರಾ?.. ಇಲ್ಲಿದೆ ನೋಡಿ.  ಗಿಡದಿಂದ ಶೇಂಗಾವನ್ನು ಬೇರ್ಪಡಿಸಲು ವಿದ್ಯಾರ್ಥಿಯೊಬ್ಬ ಅತ್ಯಂತ ಸುಲಭ ಸಾಧನ ಬಳಿಸಿ ಪರಿಣಮಕಾರಿಯಾಗಿ ಕಾಳನ್ನು ಬೇರ್ಪಡಿಸುವ ಮೂಲಕ ಜನರ ಗಮನ ಸೆಳೆದ ಘಟನೆ ತಾಲ್ಲೂಕಿನ ವೆಂಕಟಗಿರಿಯಲ್ಲಿನ ಹೊಲವೊಂದರಲ್ಲಿ ಕಂಡು ಬಂದಿದೆ.

ಗ್ರಾಮದ ಭೀಮೇಶ ಎಂಬ ಒಂಭತ್ತನೆ ತರಗತಿಯ ಬಾಲಕ ಕೊರೊನಾ ಲಾಕ್ಡೌನ್ ದಿಂದಾಗಿ ಇದೀಗ ಇನ್ನು ಶಾಲೆಗಳು ಆರಂಭವಾಗದ ಹಿನ್ನೆಲೆ ಮನೆಯಲ್ಲಿ ಉಳಿದ್ದಿದ್ದು, ಕೃಷಿ ಕೆಲಸದಲ್ಲಿ ತಂದೆಗೆ ನೆರವಾಗುವ ಉದ್ದೇಶಕ್ಕೆ ಹೊಲಕ್ಕೆ ಬರುತ್ತಿದ್ದಾನೆ. ತಮ್ಮ ಹೊಲದಲ್ಲಿ ಬೆಳೆದ ಶೇಂಗಾವನ್ನು ಸೈಕಲ್ನ ಹಿಂಬಂದಿಯ  ತಿರುಗುವ ಚಕ್ರಕ್ಕೆ ಅಡ್ಡವಾಗಿ ಹಿಡಿಯುವ ಮೂಲಕ ಅತ್ಯಂತ ಸರಳವಾಗಿ ಶೇಂಗಾ ಕಾಳುಗಳನ್ನು ಗಿಡದಿಂದ ಬೇರ್ಪಡಿಸುತ್ತಿದ್ದಾನೆ. ಇದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

'ಶೇ.98ರಷ್ಟು ಕಾಳು ಇದರಿಂದ ಬೇರ್ಪಡುತ್ತವೆ. ಬಳಿಕ ಉಳಿಯುವ ಒಂದೆರಡು ಕಾಳನ್ನು ಕೈಯಿಂದ ಕೀಳಬೇಕು. ಇದರಿಂದ ಕೆಲಸ ಬೇಗ ಆಗುತ್ತದೆ. ಅಲ್ಲದೇ ಖಚರ್ು ಕಡಿಮೆ ಎನ್ನುತ್ತಾನೆ ಬಾಲಕ ಭೀಮೇಶ. ಇದೀಗ ಬಾಲಕ ಈ ನೂತನ ಅವಿಷ್ಕಾರ ಜನರ ಗಮನ ಸೆಳೆಯುವಂತೆ ಮಾಡಿದೆ. ಕೊಪ್ಪಳದ  ಗವಿಸಿದ್ದೇಶ್ವರ ಪ್ರೌಢ ಶಾಲೆಯಲ್ಲಿ ಪ್ರಸ್ತುತ ಒಂಭತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ಬಾಲಕ, ಸರ್ಕಾರ ನೀಡಿದ ಸೈಕಲ್ ಬಳಸಿ ಜಾಣ್ಮೆ ಪ್ರದರ್ಶಿದ್ದಾನೆ. 'ಒಂದು ಡಬ್ಬಿ ಶೇಂಗಾ ಕೀಳಲು ಕೂಲಿಗಳಿಗೆ 30 ರೂಪಾಯಿ ವೆಚ್ಚವಾಗುತ್ತದೆ. ಆದರೆ ಈ ವಿಧಾನದಿಂದ ಬೇಗ ಶೇಂಗಾ ಕೀಳಬಹುದು ಹಾಗೂ  ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡಬಹುದು. ಯೂಟ್ಯೂಬ್ನಲ್ಲಿ ಬರುವ ಇತರ ಸರಳ ವಿಧಾನಗಳನ್ನು ಗಮನಿಸಿ ನಾನು ಈ ಕೆಲಸಕ್ಕೆ ಕೈಹಾಕಿದ್ದು ಅತ್ಯಂತ ಸರಳವಾಗಿದೆ ಎಂದು ಬಾಲಕ ಸಂತಸ ವ್ಯಕ್ತಪಡಿಸಿದ್ದಾನೆ. 

ವರದಿ: ಶ್ರೀನಿವಾಸ .ಎಂ.ಜೆ

SCROLL FOR NEXT