ರಾಜ್ಯ

ಸಂಕಷ್ಟಗಳ ನಡುವೆಯೂ ಐಪಿಎಸ್ ಆದ ರೈತ ಪುತ್ರ ವಿವೇಕ್ ಹೆಚ್.ಬಿ.!

Manjula VN

ತುಮಕೂರು: ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ 2019ರ ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನೀಡಿದ ಮೀಸಲಾತಿಯು ರಾಜ್ಯದ ವಿವೇಕ್ ಹೆಚ್.ಬಿಯವರಿಗೆ ವರವಾಗಿ ಪರಿಣಮಿಸಿದೆ. 

ವಿವೇಕ್ ಅವರು ಈ ಹಿಂದೆ ಕೂಡ 2018ರಲ್ಲಿಯೂ ಪರೀಕ್ಷೆ ಬರೆದಿದ್ದರು. ಈ ವೇಳೆ 257ನೇ ರ್ಯಾಂಕ್ ಪಡೆದುಕೊಂಡಿದ್ದರು. ಸಾಮಾನ್ಯ ವರ್ಗಕ್ಕೆ ಸೇರಿದ್ದ ಕಾರಣ ಐಎಎಸ್ ಗುರಿ ಮುಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೀಸಲಾತಿ ನೀಡಿದ ಕಾರಣ 444ನೇ ರ್ಯಾಂಕ್ ಪಡೆದಿದ್ದರೂ, ಐಪಿಎಸ್ ಪಡೆಯಲು ಸಾಧ್ಯವಾಗಿದೆ. ಇದೀಗ ವಿವೇಕ್ ಅವರು ಹೈದರಾಬಾದ್‌ನ ಇಂಡಿಯನ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಶೀಘ್ರದಲ್ಲಿಯೇ ಸೇರ್ಪಡೆಗೊಳ್ಳಲಿದ್ದಾರೆ. 

ರೈತ ಕುಟುಂಬಕ್ಕೆ ಸೇರಿದ ವಿವೇಕ್ ಅವರು, ಕೆಲ ವರ್ಷಗಳ ಹಿಂದಷ್ಟೇ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಇವರ ಸಹೋದರಿ ಸುಕನ್ಯಾ ಅವರು, ಗಣಿತ ಶಿಕ್ಷಕಿಯಾಗಿದ್ದಾರೆ. ತಮ್ಮ ಸಹೋದರಿಯೇ ತಮಗೆ ಮಾರ್ಗದರ್ಶಿಯಾಗಿದ್ದರು ಎಂದು ವಿವೇಕ್ ಅವರು ಹೇಳಿದ್ದಾರೆ. 

ವಿವೇಕ್ ಅವರ ತಂದೆ ಹೆಚ್.ಎಲ್.ಬಸವಲಿಂಗಯ್ಯಾ ಅವರು ತಿಪಟೂರು ತಾಲೂಕಿನ ಹುಚ್ಚಗೊಂಡನಹಳ್ಳಿಯ ರೈತರಾಗಿದ್ದಾರೆ. 10ನೇ ತರಗತಿಯವರೆಗೂ ವಿದ್ಯಾಭ್ಯಾಸ ಮಾಡಿರುವ ವಿವೇಕ್ ಅವರ ತಂದೆ, ತಮ್ಮ ಮಗನ ಸಾಧನೆಯನ್ನು ಕೊಂಡಾಡಿದ್ದಾರೆ. 

ತಿಪಟೂರಿನ ಕಲ್ಪತರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಅವರು, ಆರಂಭದಲ್ಲಿ ಎಂಎನ್'ಸಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸಿದ್ದರು. 

ಪೋಲಿಸ್ ಪಡೆಯಲ್ಲಿ ನಮ್ರತೆ ತರಲು ಮತ್ತು ಸಾರ್ವಜನಿಕ ನಂಬಿಕೆಯನ್ನು ಬೆಳೆಸುವ ಮೂಲಕ ಸಮಾಜದ ಕೊನೆಯ ವ್ಯಕ್ತಿಗೆ ನ್ಯಾಯ ಒದಗಿಸಲು ನಾನು ಪ್ರಯತ್ನಿಸುತ್ತೇನೆಂದು ವಿವೇಕ್ ಅವರು ಹೇಳಿದ್ದಾರೆ. 

ಐಆರ್ಎಸ್ ನಿಂದ ಐಎಎಸ್ ರ್ಯಾಂಕ್ ಪಡೆದ ಗ್ರಾಮೀಣ ಪದವೀಧರ
ತುಮಕೂರಿನ ಹೆಬ್ಬೂರು ಗ್ರಾಮದ ನಿವಾಸಿ, 2017 ಬ್ಯಾಂಚ್'ನ ಐಆರ್ಎಸ್ ಅಧಿಕಾರಿ ಹರೀಶ್ ಬಿ.ಸಿಯವರು ಈ ಬಾರಿ 409ನೇ ರ್ಯಾಂಕ್ ಪಡೆಯುವ ಮೂಲಕ ಎಎಎಸ್ ಅಧಿಕಾರಿಯಾಗಿದ್ದಾರೆ. 

ಹರೀಶ್ ಅವರ ತಂದೆ ಚಿಕ್ಕವೆಂಕಟಯ್ಯ ಅವರು ಮೂಲತಃ ರೈತರಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಇನ್ನು ಇವರ ತಾಯಿ ಕೂಡ ಕೃಷಿಕರಾಗಿದ್ದಾರೆ.  

ಕನಸನ್ನು ನನಸು ಮಾಡಿಕೊಳ್ಳಲು ವೈವಾಹಿಕ ಜೀವನ ನನ್ನನ್ನು ತಡೆಹಿಡಿಯಲಿಲ್ಲ. ಪತ್ನಿ ರಶ್ಮಿ ಎಂಜಿನಿಯರ್ ಆಗಿದ್ದು, ನನ್ನ ಪ್ರತೀಯೊಂದು ಗುರಿಯೊಂದಿಗೂ ಸಹಕಾರ ನೀಡಿದ್ದರು ಎಂದು ಹರೀಶ್ ಅವರು ಹೇಳಿದ್ದಾರೆ. 

SCROLL FOR NEXT