ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ನೆರವೇರುವುದರೊಂದಿಗೆ ಶ್ರೀರಾಮನಿಗೆ ಕೊನೆಗೂ ತಾತ್ಕಾಲಿಕ ಜಾಗದಿಂದ ಮುಕ್ತಿ ಸಿಗುವ ಕಾಲ ಹತ್ತಿರಕ್ಕೆ ಬಂದಿದೆ. ದಶರಥ ಪುತ್ರ, ಅಯೋಧ್ಯಾಧೀಶ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕುರಿತ ಕೋಟ್ಯಾಂತರ ಭಾರತೀಯರ ಕನಸು ನನಗಾಸುವ ಕ್ಷಣ ಹತ್ತಿರ ಬಂದಿದ್ದು, ಇಂದು ಮಧ್ಯಾಹ್ನ 12.44ರ ಶುಭ ಮುಹೂರ್ತದಲ್ಲಿ ಅಯೋಧ್ಯಯಲ್ಲಿ ರಾಮ ಮಂದಿರಕ್ಕೆ ಪ್ರಧಾನಿ ಮೋದಿಯವರು ಭೂಮಿ ಪೂಜೆ ನೆರವೇರಿಸುತ್ತಿದ್ದು, ಈ ವೇಳೆ ರಾಜ್ಯದಲ್ಲಿರುವ ಎಲ್ಲಾ ದೇಗುಲಗಳಲ್ಲು ಶ್ರೀರಾಮನ ಜಪ ಮುಗಿಲು ಮುಟ್ಟಲಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬುಧವಾರ ನಡೆಯಲಿರುವ ಶ್ರೀರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಶಿಲಾನ್ಯಾಸ ಕಾರ್ಯಕ್ರಮ ನಿರ್ವಿಘ್ನವಾಗಿ ನೆರವೇರುವಂತೆ ರಾಜ್ಯದಲ್ಲಿನ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪಾರ್ಥನೆ ಸಲ್ಲಿಸುವಂತೆ ಮುಜರಾಯಿ ಇಲಾಖೆ ಸೂಚನೆ ನೀಡಿದೆ.
ಇದೇ ವೇಳೆ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮತ್ತು ಪ್ರತೀ ಮನೆಗಳಲ್ಲಿ ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಾಮ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯುವಂತೆ ಪ್ರಾರ್ಥಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಕೂಡ ಟ್ವೀಟ್ ಮೂಲಕ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಘಟಕ ಕೂಡ ಕಾರ್ಯಕರ್ತರ ಬಳಿ ಮನವಿ ಮಾಡಿಕೊಂಡಿದ್ದು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ವೇಳೆ ಬಿಜೆಪಿ ಕಾರ್ಯಕರ್ತರು ಬಹಿರಂಗವಾಗಿ ಮೆರವಣಿಗೆ, ಪಟಾಕಿ ಹಚ್ಚಬಾರದು. ಕಾರ್ಯಕರ್ತರು ಪ್ರತೀ ಮನೆಗಳಲ್ಲಿ ದೀಪ ಹಚ್ಚಿ ಸಂಭ್ರಮಿಸಬೇಕೆಂದು ಸೂಚಿಸಿದೆ ಎಂದು ತಿಳಿದುಬಂದಿದೆ.