ರಾಜ್ಯ

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ನಮ್ಮ ಅಣ್ಣ, ಗಲಭೆಕೋರರು ಹೊರಗಿನವರು: ಸ್ಥಳೀಯ ನಿವಾಸಿಗಳು

Manjula VN

ಬೆಂಗಳೂರು: ಕುಟುಂಬದ ಮೇಲಿನ ಹಗೆತನ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ವೃತ್ತಿಜೀವನವನ್ನು ಹಾಳು ಮಾಡಲು ಪ್ರತಿಸ್ಪರ್ಧಿಗಳು ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸಂಚು ರೂಪಿಸಿರಬಹುದು ಎಂದು ಮೂಲಗಳು ಮಾಹಿತಿ ನೀಡಿವೆ. 

ಡಿಜೆ ಹಳ್ಳಿ ಪೊಲೀಸ್ ಠಾಣೆ ಹಾಗೂ ಕಾವಲ್ ಬೈರಸಂದ್ರದಲ್ಲಿರುವ ಶಾಸಕನ ಮನೆ ಮೇಲೆ ದಾಳಿ ನಡೆಸಿದವರು ಹೊರಗಿನಿಂದ ಬಂದ ಗಲಭೆಕೋರರಾಗಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲೂ ಸಾಧ್ಯವಾಗದಷ್ಟು ವೇಗಗತಿಯಲ್ಲಿ ಗಲಭೆಕೋರರಾು ದಾಳಿ ನಡೆಸಿದ್ದರು. ಏಕಾಏಕಿ ಸ್ಥಳಕ್ಕೆ ಬಂದ ಸಾವಿರಾರು ಜನರು (ಶಾಸಕ ಅಖಂಡ ಶ್ರೀನಿವಾಸ ಮೂರ್ತಿ) ಅಣ್ಣನ ಮನೆ ಮೇಲೆ ದಾಳಿ ನಡೆಸಿದ್ದರು ಎಂದು ಗಲಭೆ ದೃಶ್ಯವನ್ನು ಪ್ರತ್ಯಕ್ಷವಾಗಿ ನೋಡಿದ ಡಿಜೆ ಹಳ್ಳಿ ನಿವಾಸಿಯೊಬ್ಬರು ಹೇಳಿದ್ದಾರೆ. 

ಸ್ಥಳೀಯರ ಬಹುತೇಕ ಜನರಿಗೆ ಶಾಸಕರು ಕುಟುಂಬ ಸದಸ್ಯರಾಗಿದ್ದರು. ಅಣ್ಣನ ಬೆಂಬಲಿಗರು ನಾವು. ಅವರಿಗೆ ಸಮಸ್ಯೆಯಾಗುವ ಬಗ್ಗೆ ಆಲೋಚನೆಯನ್ನಾದರೂ ನಾವು ಹೇಗೆ ಮಾಡಲು ಸಾಧ್ಯ ಎಂದು ಕೇಬಲ್ ಆಪರೇಟರ್ ಫೈರೋಜ್ ಅವರು ಹೇಳಿದ್ದಾರೆ. 

ಅಣ್ಣ ಅತ್ಯಂತ ಪ್ರಖ್ಯಾತ ರಾಜಕಾರಣಿ. ಧರ್ಮ ಹಾಗೂ ಶ್ರೀಮಂತಿಕೆಯ ಆಧಾರದ ಮೇಲೆ ಅವರು ಎಂದಿಗೂ ಜನರನ್ನು ಪ್ರತ್ಯೇಕವಾಗಿ ನೋಡಿಲ್ಲ. ಜೆಡಿಎಸ್ ನಲ್ಲಿದ್ದಾಗ ಪ್ರತೀ ಬಾರಿ ಅವರಿಗೆ ಮತ ಹಾಕಿದ್ದೇವೆ. ಅಣ್ಣನಿಗಾಗಿ ನಾವು ಮತ ಹಾಕಿದ್ದೇವೆ. ಪಕ್ಷದ ಪ್ರತಿನಿಧಿಯಾಗಿದ್ದಾರೆಂದು ಅಲ್ಲ. ಬಕ್ರೀದ್ ಹಬ್ಬದಂದು ಅಣ್ಣ ಟ್ಯಾನರಿ ರಸ್ತೆ ವೃತ್ತದಲ್ಲಿ ನಿಂತು ಪ್ರತೀಯೊಬ್ಬರಿಗೂ ಶುಭಾಶಯ ಕೋರಿದ್ದರು. ಗಣೇಶ ಹಾಗೂ ಕ್ರಿಸ್ಮಸ್ ಹಬ್ಬದಂದೂ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆಂದು ಫೈರೋಜ್ ತಿಳಿಸಿದ್ದಾರೆ. 

SCROLL FOR NEXT