ರಾಜ್ಯ

ಬೆಂಗಳೂರು ಗಲಭೆ: ಡಿ.ಜೆ.ಹಳ್ಳಿ ಠಾಣೆ ಎದುರು ಶುರುವಾಯ್ತು ಹೈಡ್ರಾಮಾ

Manjula VN

ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಪೊಲೀಸರು ಹಲವರನ್ನು ಬಂಧಿಸಿದ ಬೆನ್ನಲ್ಲೇ, ಪೊಲೀಸ್ ಠಾಣೆ ಬಳಿ ಜಮಾಯಿಸಿದ 50ಕ್ಕೂ ಹೆಚ್ಚು ಪೋಷಕರು ಅಪ್ರಾಪ್ತರಾಗಿರುವ ತಮ್ಮ ಮಕ್ಕಳು ಮುಗ್ಧರಾಗಿದ್ದು, ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು, ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಹಿನ್ನೆಲೆಯಲ್ಲೇ ನಾವು ಯುವಕರನ್ನು ಬಂಧನಕ್ಕೊಫಡಿಸಲಾಗಿದೆ. ಈ ವರೆಗೂ 264 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದ್ದು, ಇದರಲ್ಲಿ ಯಾರೊಬ್ಬರೂ ಅಪ್ರಾಪ್ತ ವಯಸ್ಕರಿಲ್ಲ. ಸಿಸಿಟಿವ ದೃಶ್ಯಾವಳಿಗಳನ್ನು ಸಂಗ್ರಹಿಸಿದ ಬಳಿಕ ಯುವಕರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಿದ್ದಾರೆ. 

ಗಲಭೆಯನ್ನು ಒಟ್ಟು 5 ಗುಂಪುಗಳು ನಡೆಸಿವೆ. ಒಂದು ಗುಂಪು ಡಿಜೆ ಹಳ್ಳಿ ಪೊಲೀಸ್ ಠಾಣೆ ಬಳಿ, ಎರಡನೇ ಗುಂಪುಪೊಲೀಸ್ ಠಾಣೆ ಒಳಗೆ, ಮೂರನೇ ಗುಂಪು ಕೆಜಿ ಹಳ್ಳಿ ಪೊಲೀಸ್ ಠಾಣೆ, ನಾಲ್ಕನೆ ತಂಡ ಶಾಸಕ ಶ್ರೀನಿವಾರ ಮೂರ್ತಿ ನಿವಾಸ, 5ನೇ ಗುಂಪು ನವೀನ್ ಮನೆಯಲ್ಲಿ ದಾಂಧಲೆ ನಡೆಸಿವೆ. ಘಟನೆ ಸಂಬಂಧ ಹಲವು ಎಫ್ಐಆರ್ ಗಳು ದಾಖಲಾಗಿವೆ ಎಂದು ತಿಳಿಸಿದ್ದಾರೆ. 

ಗಲಭೆಯಿಂದ ಎದುರಾಗಿದ್ದ ನಷ್ಟವನ್ನು ಲೆಕ್ಕಹಾಕಲಾಗುತ್ತಿದೆ. ಈ ಕಾರ್ಯ ಪೂರ್ಣಗೊಂಡ ಕೂಡಲೇ ಗಲಭೆಕೋರರಿಂದ ಆಸ್ತಿ ಜಪ್ತಿ ಮಾಡುವ ಕಾರ್ಯವನ್ನು ಆರಂಭಿಸಲಾಗುತ್ತದೆ. ಕಾನೂನು ಚೌಕಟ್ಟಿನೊಳಗೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. 

ಇನ್ನು ಠಾಣೆ ಎದುರು ಪ್ರತಿಭಟನೆ ನಡೆಸಿದ ಪೋಷಕರು ತಮ್ಮ ಮಕ್ಕಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಮಹಿಳಾ ಪೊಲೀಸರು, ನಿಷೇಧಾಜ್ಞೆ ಜಾರಿ ಇರುವ ಹಿನ್ನೆಲೆಯಲ್ಲಿ ಯಾರೂ ರಸ್ತೆಯಲ್ಲಿ ನಿಲ್ಲಬಾರದು. ನಮ್ಮ ಮಕ್ಕಳು, ಸಂಬಂಧಿಕರು ತಪ್ಪು ಮಾಡಿರುವ ಹಿನ್ನೆಲೆಯಲ್ಲಿ ಬಂಧಿಸಿ, ಕರೆತರಲಾಗಿದೆ ಎಂದು ಹೇಳಿದರು. ಇದಕ್ಕೆ ಒಪ್ಪದ ಕೆಲವರು ಘಟನೆ ವೇಳೆ ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದರು. ನಮ್ಮವರು ಬೆಂಕಿ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷ್ಯವೇನಿದೆ? ಎಂದು ಹೇಳಿದಾಗ ಪೊಲೀಸರು ಎಚ್ಚರಿಕೆ ನೀಡಿ ಸ್ಥಳದಿಂದ ಕಳುಹಿಸಿದರು.

SCROLL FOR NEXT