ಬೆಂಗಳೂರು: ಮನೆಗೆ ನುಗ್ಗಿ ವೃದ್ಧೆಯನ್ನು ಬರ್ಬರವಾಗಿ ಕೊಲೆ 45 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಾಡುಗೋಡಿಯ ಕಾಳಪ್ಪ ಲೇಔಟ್ ನಿವಾಸಿ 70 ವರ್ಷದ ವೃದ್ಧೆ ಜಯಮ್ಮ ಕೊಲೆಯಾದವರು.
ಕಳೆದ ಆ.12ರಂದು ವೃದ್ಧೆ ಜಯಮ್ಮ ಮತ್ತು ಪತಿ ಅಪ್ಪಯ್ಯಣ್ಣ ವಿದ್ಯುತ್ ಬಿಲ್ ಪಾವತಿಸುವ ಸಲುವಾಗಿ ಇಮ್ಮಡಿಹಳ್ಳಿಯ ಬೆಸ್ಕಾಂ ಕಚೇರಿಗೆ ತೆರಳಿದ್ದರು. ವಿದ್ಯುತ್ ಬಿಲ್ ಪಾವತಿಸಿದ ಬಳಿಕ ಪತಿ ಅಪ್ಪಯ್ಯಣ್ನ ಅವರ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದಾರೆ. ಜಯಮ್ಮ ಒಬ್ಬರೇ ಮನೆಗೆ ಬಂದಿದ್ದಾರೆ
ಸುಮಾರು ಒಂದು ಗಂಟೆಯ ತರುವಾಯ ಪತಿ ಅಪ್ಪಯ್ಯಣ್ಣ ಹಿಂತಿರುಗಿದಾಗ ಗೇಟ್ ತೆರೆದಿತ್ತು. ಬಾಗಿಲು ತೆರೆದು ಮನೆ ಹೊಕ್ಕಾಗ ಪಡಸಾಲೆಯಲ್ಲಿ ಜಯಮ್ಮ ಅಂಗಾತ ಬಿದ್ದಿದ್ದರು. ಪತ್ನಿಯನ್ನು ಎಬ್ಬಿಸಲು ಪ್ರಯತ್ನಿಸಿದ ಅಪ್ಪಯ್ಯಣ್ಣ ಅವರಿಗೆ ಪತ್ನಿಯ ಕತ್ತು ಕೊಯ್ದು ಹತ್ಯೆ ಮಾಡಿರುವುದು ತಿಳಿದಿದೆ.
ಕೋಣೆಯಲ್ಲಿ ಮಂಚದ ಅಡಿಯಲ್ಲಿದ್ದ ಟ್ರಂಕ್ ಹೊರಗೆಳೆಯಲಾಗಿದ್ದು ಅದರಲ್ಲಿದ್ದ 45 ಲಕ್ಷ ನಗದು, ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರ, 8 ಗ್ರಾಂ ತೂಕವಿದ್ದ 2 ಉಂಗುರ, 50 ಗ್ರಾಂ ಚಿನ್ನದ ಬ್ರೇಸ್ಲೆಟ್ ಸಹ ಕಳ್ಳತನವಾಗಿದೆ ಎಂದು ಗೊತ್ತಾಗಿದೆ,
ಸಧ್ಯ ಈ ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಸಿಸಿ ಕ್ಯಾಮೆರಾ ದೃಶ್ಯಗಳ ಆಧಾರದಲ್ಲಿ ಪೋಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.