ರಾಜ್ಯ

ಚಾಮರಾಜನಗರ: ಸಂಸದ ವಿ. ಶ್ರೀನಿವಾಸ್ ಪ್ರಸಾದ್‌ಗೆ ಕೋವಿಡ್-19 ಸೋಂಕು

Srinivasamurthy VN

ಚಾಮರಾಜನಗರ: ಸಂಸದ ವಿ. ಶ್ರೀನಿವಾಸ್ ಪ್ರಸಾದ್‌ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಈ ಕುರಿತು ಸ್ವತಃ ಶ್ರೀನಿವಾಸ್ ಪ್ರಸಾದ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದು, ‘ನನ್ನ ಕೊರೊನಾ ಪರೀಕ್ಷೆ ವರದಿ ಪಾಸಿಟಿವ್ ಬಂದಿದೆ. ವೈದ್ಯರ ಸಲಹೆಗಳನ್ನು ಪಾಲಿಸುತ್ತಿದ್ದೇನೆ. ಆತಂಕಕ್ಕೆ ಕಾರಣವಿಲ್ಲ. ಕಳೆದ ಒಂದು ವಾರದ ಅವಧಿಯಲ್ಲಿ ನನ್ನ ಸಂಪರ್ಕದಲ್ಲಿದ್ದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿ ಮತ್ತು ಹೋಮ್ ಕ್ವಾರಂಟೈನ್‌ಗೆ ಒಳಪಡಬೇಕಾಗಿ ವಿನಂತಿಸುತ್ತೇನೆ’ ಎಂದು ಹೇಳಿದ್ದಾರೆ.

ಜ್ವರ ಹಾಗೂ ಮೈಕೈ ನೋವಿನಿಂದ ಬಳಲುತ್ತಿದ್ದ ಅವರು ಮೈಸೂರಿನ ಜಯಲಕ್ಷ್ಮಿಪುರಂ ತನ್ನ ನಿವಾಸದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ಈ ಸಂದರ್ಭ ಅವರ ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ. ಶ್ರೀನಿವಾಸ್ ಪ್ರಸಾದ್ ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮನೆಯ 17ಕ್ಕೂ ಹೆಚ್ಚು ಸದಸ್ಯರ ಸ್ವ್ಯಾಬ್ ಪರೀಕ್ಷೆ ಮಾಡಲಾಗಿದ್ದು, ಪುತ್ರ, ಶಾಸಕ ಹರ್ಷವರ್ಧನ್ ಸೇರಿ ಇತರರ ಪರೀಕ್ಷಾ ವರದಿ ನೆಗಟಿವ್ ಬಂದಿದೆ.

ಸಿಎಂ ಪುತ್ರ ವಿಜಯೇಂದ್ರಗೆ ಆತಂಕ..!
ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸೋಮವಾರ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದ, ವಿಜಯೇಂದ್ರ ಅವರು, ಶ್ರೀನಿವಾಸ್ ಪ್ರಸಾದ್‌ ಅವರನ್ನು ಭೇಟಿ ಮಾಡಿದ್ದರು. ಬಳಿಕ ವಿಜಯೇಂದ್ರ ಸುತ್ತೂರು ಶ್ರೀಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದರು. ಅಲ್ಲದೇ ಸೋಮವಾರವಷ್ಟೇ ಬಿವೈ ವಿಜಯೇಂದ್ರ ಜೊತೆ ಹಾಸನ ಶಾಸಕ ಪ್ರೀತಂಗೌಡ, ಎಂಎಲ್ ಸಿ ವಿಶ್ವನಾಥ್, ಮಾಜಿ ಸಚಿವ ವಿಜಯಶಂಕರ್ ಸೇರಿದಂತೆ ಹಲವರು ಸಂಸದರನ್ನು ಭೇಟಿಯಾಗಿದ್ದರು. ಈಗ ಅವರೆಲ್ಲರಿಗೂ ಕೋವಿಡ್ ಭೀತಿ ಎದುರಾಗಿದೆ. ಅಷ್ಟೇ ಅಲ್ಲದೇ ಇದೀಗ ಅವರೆಲ್ಲರೂ ಕ್ವಾರಂಟೈನ್ ಗೆ ಒಳಗಾಗಬೇಕಿದೆ. 73 ವರ್ಷದ ಶ್ರೀನಿವಾಸ್ ಪ್ರಸಾದ್ ಆಗಸ್ಟ್ 6 ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

SCROLL FOR NEXT