ರಾಜ್ಯ

ಉತ್ತಮ ನಡವಳಿಕೆ ಉಲ್ಲೇಖಿಸಿ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ ಶಶಿಕಲಾ

Lingaraj Badiger

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿಕೆ ಶಶಿಕಲಾ ಅವರ ಸಂಬಂಧಿಕರು 10 ಕೋಟಿ ರೂಪಾಯಿ ದಂಡ ಪಾವತಿಸಿದ 15 ದಿನಗಳ ನಂತರ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಆಪ್ತೆ ಅವಧಿಗೂ ಮುನ್ನವೇ ಜೈಲಿನಿಂದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಾಲಯವು ಶಶಿಕಲಾ ಅವರಿಗೆ 2014ರಲ್ಲಿ ವಿಧಿಸಿದ್ದ 10 ಕೋಟಿ ಹತ್ತು ಸಾವಿರ ದಂಡವನ್ನು ಶಶಿಕಲಾ ಅವರ ಸಂಬಂಧಿಕರು ಕಳೆದ ತಿಂಗಳು ನಾಲ್ಕು ಡಿ.ಡಿ.ಗಳ ಮೂಲಕ ಜಮೆ ಮಾಡಿದ್ದಾರೆ. ಹೀಗಾಗಿ ಅವರು ಮುಂದಿನ ವರ್ಷ ಜನವರಿ 27ರಂದು ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಶಶಿಕಲಾ ಅವರು ಉತ್ತಮ ನಡವಳಿಕೆ ಉಲ್ಲೇಖಿಸಿ ಅವಧಿಗೂ ಮುನ್ನ ಜೈಲಿನಿಂದ ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜೈಲಿನ ನಿಯಮಗಳ ಪ್ರಕಾರ, ಉತ್ತಮ ನಡವಳಿಕೆಯ ಆಧಾರದ ಮೇಲೆ ಅಪರಾಧಿಯನ್ನು ಪ್ರತಿ ತಿಂಗಳು ಶಿಕ್ಷೆ ಅಂತ್ಯವಾಗುವ ಮೂರು ದಿನಗಳ ಮುನ್ನ ಜೈಲಿನಿಂದ ಬಿಡುಗಡೆ ಮಾಡಲು ಅವಕಾಶ ಇದೆ. ಹೀಗಾಗಿ ಶಶಿಕಲಾ ಅವರು ಉತ್ತಮ ನಡವಳಿಕೆ ಉಲ್ಲೇಖಿಸಿ ಅರ್ಜಿ ಸಲ್ಲಿಸಿದ್ದಾರೆ.

ಶಶಿಕಲಾ ಅವರ ಮನವಿಯನ್ನು ಬೆಂಗಳೂರಿನ ಜೈಲು ಅಧಿಕಾರಿಗಳಿಗೆ ಕಳುಹಿಸಲಾಗಿದೆ. " ಅರ್ಜಿಯನ್ನು ಉನ್ನತ ಅಧಿಕಾರಿಗಳಿಗೆ ರವಾನಿಸಲಾಗಿದೆ" ಎಂದು ಮೂಲಗಳು ತಿಳಿಸಿವೆ.

2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡು, ಪುದುಚೇರಿಯಲ್ಲಿ ಶಶಿಕಲಾ ಹಾಗೂ ಅವರ ಪತಿ ನಟರಾಜನ್, ಸಂಬಂಧಿಗಳಿಗೆ ಸೇರಿದ್ದ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ 1,500 ಕೋಟಿ ರೂಪಾಯಿ ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಅಲ್ಲದೇ 7 ಕೋಟಿ ರೂಪಾಯಿ ನಗದು, 5 ಕೋಟಿ ಮೌಲ್ಯದ ಆಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

SCROLL FOR NEXT