ಬೆಂಗಳೂರು: ಮನೆಯಲ್ಲೇ ಬಿಲ್ಡರ್ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ನಲ್ಲಿ ನಡೆದಿದೆ. ವಿವೇಕ್ (50) ಆತ್ಮಹತ್ಯೆಗೆ ಶರಣಾದ ಬಿಲ್ಡರ್.
ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಅವರ ಬಳಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯ ಸಂಬಂಧಿ ಬಿಲ್ಡರ್ ರಹೀಂ ಹಾಗೂ ಅವರ ಪುತ್ರನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಾಯಿಂಟ್ ವೆಂಚರ್ಸ್ ನಲ್ಲಿ ರಹೀಂ ಹಾಗೂ ವಿವೇಕ್ ಸೇರಿ ಅಪಾರ್ಟ್ ಮೆಂಟ್ ವೊಂದು ನಿರ್ಮಿಸುತ್ತಿದ್ದರು. ಆದರೆ, ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ ಬಳಿಕ ಅಪಾರ್ಟ್ ಮೆಂಟ್ ನಿರ್ಮಾಣಕ್ಕೆ ರಹೀಂ ಅಡ್ಡಗಾಲು ಹಾಕಿದರು. ಅಲ್ಲದೇ, ಒಪ್ಪಂದದಂತೆ ವಿವೇಕಗೆ ಹಣ ನೀಡದೆ ಕಿರುಕುಳ ನೀಡಲು ಆರಂಭಿಸಿದರು. ನಿನ್ನೆ ಬೆಳಿಗ್ಗೆ ರಹೀಂ ಅವರ ಬೆಂಬಲಿಗರು ಅಪಾರ್ಟ್ ಮೆಂಟ್ ಕಟ್ಟಡದ ಹತ್ತಿರ ಬಂದು ದಾಂಧಲೆ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿಯೇ ಮನನೊಂದು ವಿವೇಕ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೈಕೋಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.