ರಾಜ್ಯ

ಜಮೀನು ವಿವಾದ: ಕೋಳಿ ಅಂಗಡಿ ಮಾಲೀಕನ ಬರ್ಬರ ಹತ್ಯೆ

Shilpa D

ಬೆಂಗಳೂರು: ಕೋಳಿ ಅಂಗಡಿ ನಡೆಸುತ್ತಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನ ಹಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದೆ.

ಕಾಡುಗೊಂಡನಹಳ್ಳಿಯ ಅನ್ವರ್ ಪಾಳ್ಯದ ಸುಲ್ತಾನ್ ಪಾಷ(27) ಕೊಲೆಯಾದವರು. ರಾತ್ರಿ 8ರ ವೇಳೆ ಮನೆಯ ಹತ್ತಿರದ ಅಂಗಡಿ ಬಳಿ ನಿಂತಿದ್ದ ಸುಲ್ತಾನ್ ಅವರನ್ನು ಮಾತನಾಡುವ ನೆಪದಲ್ಲಿ ಇಬ್ಬರು ಕರೆದುಕೊಂಡು ಸ್ವಲ್ಪ ದೂರ ಹೋಗಿದ್ದಾರೆ.

ಅಲ್ಲಿ ಯಾವುದೋ ವಿಷಯವನ್ನು ಪ್ರಸ್ತಾಪಿಸಿ ಜಗಳ ಮಾಡಿ ಸುಲ್ತಾನ್ ಕುತ್ತಿಗೆ ಬಳಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಸುಲ್ತಾನ್ ಹಾಗೂ ಇಬ್ಬರ ನಡುವೆ ನಿವೇಶನ ಹಾಗೂ ಆಸ್ತಿಯ ವಿಚಾರವಾಗಿ ವಿವಾದವಿದ್ದು ಅದೇ ದ್ವೇಷದಿಂದ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಾಡುಗೊಂಡನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಲೆ ಗೈದ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

SCROLL FOR NEXT