ರಾಜ್ಯ

ಮಂಡ್ಯ: ಆಕಸ್ಮಿಕ ಬೆಂಕಿ- ಕೆನರಾ ಬ್ಯಾಂಕ್ ಕಟ್ಟಡ ಭಸ್ಮ!

Vishwanath S

ಮಂಡ್ಯ: ಆಕಸ್ಮಿಕ ಬೆಂಕಿ ತಗುಲಿ ಕೆನರಾ ಬ್ಯಾಂಕ್ ಕಟ್ಟಡ ಬೆಂಕಿಗೆ ಆಹುತಿಯಾಗಿರುವ ಘಟನೆ  ನಾಗಮಂಗಲ ತಾಲೂಕಿನ ಅರಣಿ ಗ್ರಾಮದಲ್ಲಿ ಶನಿವಾರ ರಾತ್ರಿ 4 ರ ಸಮಯದಲ್ಲಿ ಜರುಗಿದೆ.

ಕಟ್ಟಡಕ್ಕೆ ಬೆಂಕಿ ಬಿದ್ದ ಕಾರಣ ಬ್ಯಾಂಕ್‍ನಲ್ಲಿ ಇದ್ದ ಕಡತಗಳು ಹಾಗೂ ಪೀಠೋಪಕರಣಗಳು,ಕಂಪ್ಯೂಟರ್‌ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ ಇದರಿಂದ ಸುಮಾರು 50 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಬ್ಯಾಂಕ್ ಮ್ಯಾನೇಜರ್ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಸೇಫ್ ಲಾಕರ್ ಗೆ ಬೆಂಕಿ ತಗುಲದೆ ಇರುವುದರಿಂದ ಬ್ಯಾಂಕನಲ್ಲಿದ್ದ ಹಣಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಪ್ರಾಥಮಿಕ ಪೊಲೀಸ್ ತಪಾಸಣೆಯಿಂದ ತಿಳಿದು ಬಂದಿದೆ. ಈ ಬೆಂಕಿ ಅವಘಡ  ವಿದ್ಯುತ್ ಶಾರ್ಟ್ ಸರ್ಕ್ಯೂಟ್‍ನಿಂದ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ರಾತ್ರಿ ಸುಮಾರು 4 ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಬರಲು ಸಾಧ್ಯವಾಗಿಲ್ಲ. ನಂತರ ಬೆಂಕಿ ಹೊತ್ತಿಕೊಂಡ ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.

ಈ ವೇಳೆಗೆ ಬ್ಯಾಂಕ್ ಕಟ್ಟಡ ಶೇ, 75 ರಷ್ಟು ಹೊತ್ತಿ ಉರಿದಿದೆ.ಈ ಸಂಬಂಧ  ಬೆಳ್ಳೂರು ಪೊಲೀಸ್ ಠಾಣೆಯಲ್ಲಿ  ಬ್ಯಾಂಕ್ ಮ್ಯಾನೇಜರ್ ಶ್ರವಣಕುಮಾರ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳೂರು ಠಾಣೆ ಎಸ್ ಐ  ರಾಜೇಂದ್ರ ತನಿಖೆ ಕೈಗೊಂಡಿದ್ದಾರೆ.

SCROLL FOR NEXT