ರಾಜ್ಯ

ಅನೈತಿಕ ಸಂಬಂಧ ಶಂಕೆ: ಪತಿ ಮೇಲೆ ಕುದಿಯುವ ಎಣ್ಣೆ ಸುರಿದ ಪತ್ನಿ

Manjula VN

ಬೆಂಗಳೂರು: ಅನೈತಿಕ ಸಂಬಂಧ ಹೊಂದಿದ್ದಾರೆಂದು ಶಂಕಿಸಿದ ಪತ್ನಿಯೊಬ್ಬಳು ಪತಿ ಮೇಲೆ ಕುದಿಯುತ್ತಿರುವ ಎಣ್ಣೆಯನ್ನು ಸುರಿದಿರುವ ಘಟನೆಯೊಂದು ಬೆಂಗಳೂರಿನ ಮಂಜುನಾಥ ನಗರದಲ್ಲಿ ನಡೆದಿದೆ. 

ಘಟನೆಯಲ್ಲಿ ಮಹಿಳೆಯ ಪತಿ ಮಂಜುನಾಥ್ (40) ಗಾಯಗೊಂಡಿದ್ದು, ಪ್ರಾಣಾಪಾಯದಿಂದಪಾರಾಗಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಪತ್ನಿ ಪದ್ಮ ಎಂ ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 

9 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಫ್ಯಾಬ್ರಿಕೇಷನ್ ವ್ಯವಹಾರವನ್ನು ನಡೆಸಿದ್ದು, ಸಮಯ ಸಿಕ್ಕಾಗ ಸಂಗೀತ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರು. 

ಪತಿ ಅನೈತಿಕ ಸಂಬಂಧ ಹೊಂದಿದ್ದಾರೆಂದು ಪದ್ಮ ಅವರು ಶಂಕಿಸಿದ್ದು, ಈ ಬಗ್ಗೆ ಆಗಾಗ ಇಬ್ಬರ ನಡುವೆ ವಾಗ್ವಾದಗಳೂ ಕೂಡ ನಡೆಯುತ್ತಿದ್ದವು. ಇದರಂತೆ ಈ ವಾಗ್ವಾದ ವಿಕೋಪಕ್ಕೆ ತೆರಳಿದ್ದು, ಭಾನುವಾರ ಬೆಳಗಿನ ಜಾವದಲ್ಲಿ ಮಲಗಿದ್ದ ತನ್ನ ಪತಿ ಮಂಜುನಾಥ್ ಅವರ ಮೇಲೆ ಪದ್ಮಾ ಕುದಿಯುತ್ತಿರುವ ಎಣ್ಣೆಯನ್ನು ಸುರಿದಿದ್ದಾರೆ. ಬಳಿಕ ತನ್ನ ಪುತ್ರನೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಮಂಜುನಾಥ್ ಅವರು ಕೂಗಿಕೊಂಡು ನೆರೆಮನೆಯವರ ಸಹಾಯಕ್ಕೆ ಮೊರೆ ಇಟ್ಟಿದ್ದಾರೆ. 

ಕೂಡಲೇ ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಮಂಜನಾಥ್ ಅವರ ಸ್ಥಿತಿ ಸುಧಾರಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

SCROLL FOR NEXT