ರಾಜ್ಯ

ಕೊಡಗು: ಪುಣ್ಯಕ್ಷೇತ್ರ ಭಾಗಮಂಡಲದಲ್ಲಿ ರಾಶಿ ರಾಶಿ ಕಸ, ದುರ್ವಾಸನೆ 

Nagaraja AB

ಮಡಿಕೇರಿ: ಪುಣ್ಯ ಕ್ಷೇತ್ರಗಳಾದ ತಲ ಕಾವೇರಿ ಹಾಗೂ ಭಾಗ ಮಂಡಲಕ್ಕೆ ಪ್ರತಿದಿನ ನೂರಾರು ಸಂಖ್ಯೆಯ ಭಕ್ತಾಧಿಗಳು ಆಗಮಿಸುತ್ತಿದ್ದು, ಪ್ರತಿದಿನ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

 ಆದರೆ, ತ್ಯಾಜ್ಯ ಸಂಸ್ಕರಣೆ ಮಾಡಲು ಭಾಗ ಮಂಡಲ ಗ್ರಾಮ ಪಂಚಾಯಿತಿಯಲ್ಲಿ ಸರಿಯಾದ ಜಾಗ  ಸಿಗುತ್ತಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕವೂ ಇಲ್ಲ. ಇದರಿಂದಾಗಿ ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಬಿದಿದ್ದು, ದುರ್ವಾಸನೆ ಬೀರುತ್ತಿದೆ.

ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಭಾಗಮಂಡಲ ಗ್ರಾಮ ಪಂಚಾಯಿತಿಗೆ ಯಾವಾಗಲೂ ಸವಾಲ್ ಆಗಿದೆ. ಕೆಲ ವರ್ಷಗಳ ಹಿಂದೆ ಖಾಸಗಿ ಪ್ರದೇಶದಲ್ಲಿ ತ್ಯಾಜ್ಯ ಹಾಕುತ್ತಿದ್ದರಿಂದ ಪಂಚಾಯಿತಿ ಸುದ್ದಿಯಾಗಿತ್ತು. ಅದರಿಂದ ಪರೋಕ್ಷವಾಗಿ ಕಾವೇರಿ ನದಿ ದಂಡಕ್ಕೆ ಹಾನಿಯಾಗುತಿತ್ತು. 

ಆದಾಗ್ಯೂ, ಸ್ಥಳೀಯರು ಸೂಕ್ತ ಜಾಗವನ್ನು ಗುರುತಿಸಿದ್ದರೂ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ರಾಜ್ಯ ಸರ್ಕಾರ 13. 24 ಲಕ್ಷವನ್ನು ಬಿಡುಗಡೆ ಮಾಡಿತ್ತು. ಆದರೆ, ಸರಿಯಾದ ಜಾಗ ಮಾತ್ರ ಸಿಕ್ಕಿಲ್ಲ. ಈಗಲೂ ಕೂಡಾ ಹುಡುಕಾಟ ಮುಂದುವರೆದಿದೆ. ತಿಮ್ಮಯ್ಯ ಗ್ರಾಮದ ವ್ಯಾಪ್ತಿಯಲ್ಲಿ ಜಾಗ ಗುರುತಿಸಿ ಇನ್ನೇನೂ ಕೆಲಸ ಪ್ರಾರಂಭಿಸಬೇಕು ಎನ್ನುವಷ್ಟರಲ್ಲಿ ಅರಣ್ಯ ಇಲಾಖೆಯಿಂದ ವಿರೋಧ ವ್ಯಕ್ತವಾಯಿತು.

ಪ್ರಸ್ತುತ ಸರ್ವೇ ನಂಬರ್ 78/2ರಲ್ಲಿ ಮತ್ತೊಂದು ಪ್ರದೇಶವನ್ನು ಗುರುತಿಸಲಾಗಿದೆ. ಆದರೆ, ಅದಕ್ಕೂ ಅಯ್ಯನ್ ಗೇರಿ ಗ್ರಾಮ ಪಂಚಾಯಿತಿಯಿಂದ ವಿರೋಧ ವ್ಯಕ್ತವಾದ್ದರಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಾಗಮಂಡಲ ಹಾಗೂ ಅಯ್ಯನ್ ಗೇರಿ  ಪಂಚಾಯಿತಿ ಎರಡಕ್ಕೂ  ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಮಾಡಿದ್ದಾರೆ.

ಈ ಸಂಬಂಧ ಆದೇಶ ಬರಬೇಕಾಗಿದೆ. ಎರಡು ಪಂಚಾಯಿತಿಗೂ ಆದೇಶ ದೊರೆತ ನಂತರ ಕೆಲಸ ಆರಂಭಿಸಲಾಗುವುದು ಎಂದು ಭಾಗಮಂಡಲ ಗ್ರಾಮ ಪಂಚಾಯಿತಿ ಪಿಡಿಒ ತಿಳಿಸಿದ್ದಾರೆ.

SCROLL FOR NEXT