ರಾಜ್ಯ

ಬೆಂಗಳೂರನ್ನು 24/7 ನಗರವನ್ನಾಗಿಸುತ್ತೇವೆ: ಭಾಸ್ಕರ್ ರಾವ್

Srinivas Rao BV

ಬೆಂಗಳೂರು: ಬೆಂಗಳೂರನ್ನು 24/7 ನಗರವನ್ನಾಗಿಸಲು ಪೊಲೀಸರು ಸಜ್ಜುಗೊಳ್ಳುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
 
ಫೆ.13 ರಂದು ಎಫ್ ಕೆ ಸಿಸಿಐ ನ ಸದಸ್ಯರೊಂದಿಗೆ ಸಂವಾದದಲ್ಲಿ ಭಾಗವಹಿಸಿ ಮಾತನಾಡಿರುವ ಭಾಸ್ಕರ್ ರಾವ್, ಈ ಉದ್ದೇಶಕ್ಕಾಗಿ ನಮ್ಮ ಪೊಲೀಸ್ ಪಡೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಈಗಿನ ಪರಿಸ್ಥಿತಿಯಲ್ಲಿ 11 ಗಂಟೆಯ ನಂತರ ನಗರವನ್ನು ನೋಡಿದರೆ ಬಹುತೇಕ ಒಳ್ಳೆಯ ಜನರು ಒಳಗೆ ಇರುತ್ತಾರೆ. ಕೆಟ್ಟ ಜನರು ಹೊರಗೆ ಇರುತ್ತಾರೆ. ಬೆಂಗಳೂರನ್ನು 24/7 ನಗರವನ್ನಾಗಿಸಲು ಸಾರಿಗೆಯಂತಹ ಬೇರೆ ಅಂಶಗಳೆಡೆಗೂ ಕೆಲಸ ಮಾಡಬೇಕಿದೆ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. 

ಹೊಯ್ಸಲ ಗಸ್ತು ವಾಹನಗಳ ಸಂಖ್ಯೆ ಏರಿಕೆ, ಪ್ರತಿಕ್ರಿಯೆ ನೀಡುವ ಸಮಯವನ್ನು ಮೂರು ನಿಮಿಷಕ್ಕೆ ಇಳಿಸುವ ಪ್ರಸ್ತಾವನೆ ಇದೆ. ಈಗ 285 ಹೊಯ್ಸಳ ವಾಹನಗಳಿದ್ದು, ಪ್ರತಿಕ್ರಿಯೆ ನೀಡುವ ಸಮಯ ಸರಾಸರಿ 10 ನಿಮಿಷಗಳಷ್ಟಿದೆ. ಗೃಹ ಇಲಾಖೆಗೆ ಹೊಯ್ಸಳ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲು ಮನವಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಐಐಟಿ ಪ್ರತಿಕ್ರಿಯೆ ನೀಡುವ ಸಮಯವನ್ನು 5-7 ನಿಮಿಷಕ್ಕೆ ಇಳಿಕೆ ಮಾಡಲು ಸಹಕರಿಸುತ್ತದೆ. 500-600 ವಾಹನಗಳಿದ್ದರೆ ಪ್ರತಿಕ್ರಿಯೆ ಸಮಯವನ್ನು 3 ನಿಮಿಷಕ್ಕೆ ಇಳಿಸಬಹುದು ಎಂದು ಹೇಳಿದ್ದಾರೆ ಭಾಸ್ಕರ್ ರಾವ್. 

ನಿರ್ಭಯ ಯೋಜನೆಯಡಿ ನಗರಕ್ಕೆ 17,000 ಕ್ಯಾಮರಾಗಳು ಲಭ್ಯವಾಗಲಿದೆ. ಜೊತೆಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬಹುಮಹಡಿ ಅತ್ಯಾಧುನಿಕ ಕಂಟೋಲ್ ರೂಮ್ ಸಹ ಸ್ಥಾಪನೆಯಾಗಲಿದೆ ಎಂದಿರುವ ಭಾಸ್ಕರ್ ರಾವ್, ಬೆಂಗಳೂರಿನಲ್ಲಿ ವಲಸಿಗ ಉದ್ಯೋಗಿಗಳ ಕುರಿತ ಪ್ರಶ್ನೆಗೆ ಉತ್ತರಿಸಿದ್ದು, ವಲಸಿಗರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಉದ್ಯೋಗ ನೀಡುವವರು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೆ, ಅಪರಾಧ ನಡೆಯುವುದನ್ನು ತಪ್ಪಿಸುವ ಸಾಧ್ಯತೆಗಳಿತ್ತು. ಉದ್ಯೋಗ ನೀಡುವವರು ವಲಸಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ. 

SCROLL FOR NEXT