ರಾಜ್ಯ

ಮಂಡ್ಯ: ಅಕ್ರಮ ಮರಳು ದಂಧೆ ತಡೆಯುವಲ್ಲಿ ಕರ್ತವ್ಯಲೋಪ, ಕೆಸ್ತೂರು ಪಿಎಸ್ಐ ಸಸ್ಪೆಂಡ್

Lingaraj Badiger

ಮಂಡ್ಯ: ಶಿಂಷಾ ನದಿ ಪಾತ್ರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮರಳು ದಂಧೆ ನಿಯಂತ್ರಿಸುವಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಕೆಸ್ತೂರು ಪೊಲೀಸ್ ಠಾಣಾ ಪಿಎಸ್ಐ ಪ್ರಭಾ ಅವರನ್ನು ಸೇವೆಯಿಂದ ಅಮಾನತು ಮಾಡಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಆದೇಶ ಹೊರಡಿಸಿದ್ದಾರೆ.

ಫೆಬ್ರವರಿ ೪ರಂದು ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲನ ಕುಪ್ಪೆ ಗ್ರಾಮದ ತುಮಕೂರು- ಮದ್ದೂರು ರಾಜ್ಯ ಹೆದ್ದಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಲಾರಿಯೊಂದು ಪ್ರಯಾಣಿಕರ ಆಟೋಗೆ ಡಿಕ್ಕಿ ಹೊಡೆದು ಮೂವರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದರು. ಅಪಘಾತವಾದ ತಕ್ಷಣವೇ ಲಾರಿಯಲ್ಲಿದ್ದ ಮರಳನ್ನು ದಂಧೆಕೋರರು ಹೆದ್ದಾರಿ ಪಕ್ಕದ ಜಮೀನಿನಲ್ಲಿ ಸುರಿದು ಮರಳು ಸಾಗಾಣಿಕೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ.

ಲಾರಿ ಮಾಲೀಕರೊಂದಿಗೆ ಪಿಎಸ್ಐ ಪ್ರಭಾ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.

ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಕೆ. ಪರಶುರಾಮ್ ಅವರನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ್ದ ಎಸ್ಪಿ ಕೆ,ಪರಶುರಾಮ್‌ಗೆ ಮೇಲ್ನೋಟಕ್ಕೆ ಕರ್ತವ್ಯಲೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕೆಸ್ತೂರು ಠಾಣಾ ಪಿಎಸ್ಐ ಪ್ರಭಾ ಅವರನ್ನು ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

SCROLL FOR NEXT