ಮಂಡ್ಯ: ಕೆಎಸ್ಆರ್ಟಿಸಿ ಬಸ್ಸಿಗೆ ಟಿಪ್ಪರ್ ಡಿಕ್ಕಿ ಯೊಡೆದ ಪರಿಣಾಮ 27 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಬಳಿ ಸೋಮವಾರ ನಡೆದಿದೆ.
ನಟರಾಜ್, ಪದ್ಮ, ಸಚಿನ್, ಪೃಥ್ವಿ, ಗೋವಿಂದ, ಮಹೇಶ್, ಸಿಂಚನ, ಲಕ್ಷ್ಮಿ, ಹೇಮಂತ್, ಅಭಿಷೇಕ್ ಅವರನ್ನೊಳಗೊಂಡಂತೆ 27ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಪ್ರಿತಿ ಎಂಬುವವರಿಗೆ ಮೂಳೆ ಮುರಿದಿದ್ದು, ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯದಿಂದ ಶ್ರೀರಂಗಪಟ್ಟಣದ ಕಡೆಗೆ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಾರಿಗೆ ಬಸ್ಸು ಕೆ.ಶೆಟ್ಟಿಹಳ್ಳಿಯಲ್ಲಿ ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದೆ. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ 27 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬೆಳಗ್ಗೆ ಸುಮಾರು 9.30 ರಿಂದ 10ರ ಸಮಯದಲ್ಲಿ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ನೌಕಕರು ಸೇರಿದಂತೆ ಒಟ್ಟು 40 ಜನರಿದ್ದರು. ಈ ಪೈಕಿ. 27ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಒಂದಿಬ್ಬರಿಗೆ ಮೂಳೆ ಮುರಿದಿವೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶ್ರೀರಂಪಟ್ಟಣ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು. ಪ್ರಾರ್ಥಮಿಕ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಇರುವವರನ್ನು ಮೈಸೂರಿನ ಆಸ್ಪತ್ರೆಗೆ ಆ್ಯಂಬುಲೆನ್ಸ್ ಮೂಲಕ ರವಾನಿಸಲಾಗಿದೆ.
ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ್ ಲಾರಿಯು ಶ್ರೀರಂಗಪಟ್ಟಣದ ರಾಮಕೃಷ್ಣಯ್ಯ ಎಂಬುವವರಿಗೆ ಸೇರಿದ್ದಾಗಿದೆ.
ಇಂದು ಬೆಳಿಗ್ಗೆ ಬ್ರಹ್ಮಲಿಂಗೇಶ್ವರ ಸ್ಟೋನ್ ಕ್ರಷರ್ಸ್ ನಲ್ಲಿ ಕಲ್ಲುಗಳನ್ನು ತುಂಬಿಕೊಂಡು ಈ ಟಿಪ್ಪರ್ ಲಾರಿ ಮೈಸೂರುಕಡೆಗೆ ಹೊರಟ್ಟಿತ್ತು. ಆದರೆ ಮಾರ್ಗ ಮಧ್ಯೆ ಚಾಲಕನ ಅಜಾಗರೂಕತೆಯಿಂದ ಮುಂದೆ ಚಲಿಸುತ್ತಿದ್ದ ಸಾರಿಗೆ ಬಸ್ ಗೆ ಡಿಕ್ಕಿಹೊಡೆದಿದೆ ಎನ್ನಲಾಗಿದೆ. ಚಾಲಕನನ್ನು ವಶಕ್ಕೆ ಪಡೆದಿರುವ ಶ್ರೀರಂಗಪಟ್ಟಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಈ ಸಂಬಂಧ ಶ್ರೀರಂಗಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.