ರಾಜ್ಯ

ಮಹದಾಯಿ ಗೆಜೆಟ್‌ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್‌ ಸೂಚನೆ ಸ್ವಾಗತಾರ್ಹ: ಜಗದೀಶ್‌ ಶೆಟ್ಟರ್‌

Srinivasamurthy VN

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಷಯ ಕುರಿತು ಗೆಜೆಟ್‌ ಅಧಿಸೂಚನೆ ಹೊರಡಿಸಲು ಸುಪ್ರಿಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿರುವುದು ಸ್ವಾಗತಾರ್ಹ ಸಂಗತಿ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಉತ್ತರ ಕರ್ನಾಟಕದ ಜನರ ಪಾಲಿಗೆ ಇದು ಬಹಳ ಅತ್ಯಂತ ಸಂತಸದ ಸಂಗತಿಯಾಗಿದೆ. ದಶಕಗಳಿಂದ ವಿವಾದಕ್ಕೀಡಾಗಿದ್ದ ಈ ನೀರಿನ ಬಳಕೆ ಮಾಡಿಕೊಳ್ಳಲು ಇದ್ದ ತೊಡಕು ಇದರಿಂದಾಗಿ ಕೊನೆಯಾದಂತಾಗಿದೆ. ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದ 4 ಜಿಲ್ಲೆಯ 11 ತಾಲ್ಲೂಕಿನ ಗ್ರಾಮಗಳು ಹಾಗೂ ಜನರು ಇದರಿಂದ ಸಮಾಧಾನದ ಉಸಿರು ಬಿಡುವಂತಾಗಿದೆ ಎಂದಿದ್ದಾರೆ.

ಈ ತೀರ್ಪಿನಿಂದಾಗಿ ಮಹದಾಯಿ ಪ್ರದೇಶದಲ್ಲಿ ತಕ್ಷಣವೇ ಕಾಮಗಾರಿ ಕೈಗೊಳ್ಳಲು ಅನುಕೂಲ ಮಾಡಿಕೊಡುವಂತಾಗುತ್ತದೆ. ಸುಪ್ರೀಂ ಕೋರ್ಟಿನ ಈ ಸೂಚನೆಯಂತೆ ಆದಷ್ಟು ಬೇಗ ಕೇಂದ್ರ ಸರಕಾರ ಗೆಜೆಟ್‌ ಹೊರಡಿಸುವಂತೆ ವಿನಂತಿಸುತ್ತೇನೆ. ಇದೇ ವೇಳೆ ಈ ಭಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಗತ್ಯವಿರುವ ಅನುದಾನವ ನೀಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದರ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಗಳ ಗಮನ ಸೆಳೆಯುವುದಾಗಿ ಶೆಟ್ಟರ್ ಹೇಳಿದ್ದಾರೆ. 

ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತು ಗೆಜೆಟ್​ ನೋಟಿಫಿಕೇಷನ್​ ಹೊರಡಿಸಲು ಸುಪ್ರೀಂ ಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ್ದು, ಗೋವಾ, ಮಹಾರಾಷ್ಟ್ರ , ಕರ್ನಾಟಕ ಮೂರು ರಾಜ್ಯಗಳಿಗೂ ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದೆ. ಈ ಮೂಲಕ ಉತ್ತರ ಕರ್ನಾಟಕದ ಜನರ ಹೋರಾಟಕ್ಕೆ ಕೊನೆಗೂ ಮನ್ನಣೆ ಸಿಕ್ಕಿದಂತಾಗಿದೆ. ಅಧಿಸೂಚನೆ ಹೊರಡಿಸಿದ ಹಿನ್ನೆಲೆ ಮೂರು ರಾಜ್ಯಗಳು ಸಮರ್ಥ ದಾಖಲೆ ಸಲ್ಲಿಸಲು ಸೂಚಿಸಲಾಗಿದ್ದು, ದಾಖಲೆ ಸಲ್ಲಿಕೆಯಾದ ಬಳಿಕ ನಿರಂತರ ವಿಚಾರಣೆ ನಡೆಸಲಾಗುವುದು ಎಂದು ಕೂಡ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ. ಇದಕ್ಕೆ ಗೋವಾ, ಮಹಾರಾಷ್ಟ್ರ ಸಹಮತ ಸೂಚಿಸಿದೆ.

SCROLL FOR NEXT