ಬೆಂಗಳೂರು: ನನ್ನ ತಾಯಿ, ಅಜ್ಜಿ ದೇವದಾಸಿಯಾಗಿದ್ದರು. ಆದರೆ ನನಗೆ ದೇವದಾಸಿ ಆಗಲು ಇಚ್ಛೆಯಿಲ್ಲ. ನನಗೆ ವಿಜ್ಞಾನ ಶಿಕ್ಷಕಿಯಾಗಬೇಕೆಂಬ ಆಸೆ. ಆದರೆ ನನ್ನ ಚಿಕ್ಕಪ್ಪ ಮತ್ತು ಅಜ್ಜಿ ನಾನು ಕೂಡ ದೇವದಾಸಿ ಆಗಬೇಕೆಂದು ಬಯಸುತ್ತಿದ್ದಾರೆ, ಸರ್ಕಾರ ಅದನ್ನು ನಿಷೇಧ ಮಾಡಿದರೂ ನಮ್ಮೂರಿನಲ್ಲಿ ಈ ಪದ್ದತಿ ಇನ್ನೂ ಇದೆ ಎನ್ನುತ್ತಾಳೆ 14 ವರ್ಷದ ಬಾಗಲಕೋಟೆಯ ಸಂಧ್ಯಾ(ಹೆಸರು ಬದಲಿಸಲಾಗಿದೆ).
ತಮಗೆ ಸಮಾಜದಲ್ಲಿ ನ್ಯಾಯಯುತವಾಗಿ ಗೌರವವಾಗಿ ಬದುಕುವ ಹಕ್ಕು ನೀಡಿ ಎಂದು ಕೇಳಿಕೊಳ್ಳಲು ಆಕೆಯ ಜೊತೆಗೆ ಐದು ಜಿಲ್ಲೆಗಳಿಂದ ಹಲವು ಬಾಲಕಿಯರು ಬೆಂಗಳೂರಿಗೆ ಬಂದಿದ್ದರು.
ಏನಿದು ದೇವದಾಸಿ ಪದ್ಧತಿ: ಈ ಪದ್ಧತಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಹೆಚ್ಚಳವಾಗಿದೆ. ಬಾಲಕಿಯರು ಋತುಮತಿಯಾದ ಮೇಲೆ ಸ್ಥಳೀಯ ದೇವಸ್ಥಾನಗಳಲ್ಲಿ ದೇವರ ಕೆಲಸ ಮಾಡಲೆಂದು ಕಳುಹಿಸಲಾಗುತ್ತದೆ. ಮೊದಲ ಸಲ ಋತುಮತಿಯಾದ ನಂತರ 11 ದಿನಗಳವರೆಗೆ ಶುದ್ಧೀಕರಣ ಸಂಪ್ರದಾಯ ಮಾಡಿ ಮುಗಿಸಿ ಬಳಿಕ ದೇವಸ್ಥಾನದ ಕೆಲಸಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಕೆಲಸ ಮಾಡುತ್ತಾ ಪುರುಷರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ.
ಹೀಗೆ ಬೆಂಗಳೂರಿಗೆ ಬಂದಿದ್ದ ಹುಡುಗಿಯರಲ್ಲಿ ಮತ್ತೊಬ್ಬ ಮಾಲಾ(ಹೆಸರು ಬದಲಿಸಲಾಗಿದೆ) ಎಂಬ ಬಳ್ಳಾರಿ ಜಿಲ್ಲೆಯ ಬಾಲಕಿ ಹೀಗೆ ಹೇಳುತ್ತಾಳೆ: ಮಹಾರಾಷ್ಟ್ರದ ಸಾಂಗ್ಲಿ ನಮ್ಮೂರು. ಅಲ್ಲಿಂದ ನಾವು ಬೇರೆ ಕಡೆ ಬಂದಿದ್ದೇವೆ.ದೇವದಾಸಿ ಪದ್ಧತಿ ವಿರುದ್ಧ ಹೋರಾಡುವ ಎನ್ ಜಿಒದಲ್ಲಿ ನನ್ನ ತಾಯಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಕೆಲಸ ಮಾಡಿಕೊಂಡು ನನ್ನ ಮತ್ತು ನನ್ನ ಸೋದರನ ವಿದ್ಯಾಭ್ಯಾಸದ ಖರ್ಚು ನೋಡಿಕೊಳ್ಳುತ್ತಿದ್ದಾರೆ. ನನ್ನ ಸೋದರ ಇಂಗ್ಲಿಷ್ ಮಾಧ್ಯಮ ಮತ್ತು ನಾನು ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದೇವೆ. ನನಗೇನು ಬೇಸರವಿಲ್ಲ, ಕನಿಷ್ಠ ವಿದ್ಯಾಭ್ಯಾಸವಾದರೂ ಸಿಗುತ್ತಿದೆಯಲ್ಲವೇ, ಆದರೆ 10ನೇ ತರಗತಿ ಕಳೆದ ನಂತರ ಮುಂದೇನು?ನಮ್ಮಿಬ್ಬರ ವಿದ್ಯಾಭ್ಯಾಸದ ಖರ್ಚನ್ನು ತಾಯಿ ಹೇಗೆ ನಿಭಾಯಿಸುತ್ತಾರೆ ಎಂದು ಗೊತ್ತಾಗುವುದಿಲ್ಲ ಎನ್ನುತ್ತಾಳೆ ಮಾಲಾ.
ತನ್ನ ಓದಿಗೆ ಸರ್ಕಾರದಿಂದಲೂ ಸಹಾಯ ಸಿಗದಿದ್ದರೆ ಬಾಲ್ಯ ವಿವಾಹ ಮಾಡಿಬಿಡಬಹುದು ಎಂಬ ಚಿಂತೆ ಆಕೆಗೆ. ಮಾಜಿ ಸಿದ್ದರಾಮಯ್ಯನವರ ದೇವದಾಸಿ ಮಕ್ಕಳಿಗೆ ಶಿಕ್ಷಣಕ್ಕೆ 3 ಲಕ್ಷದವರೆಗೆ ಆರ್ಥಿಕ ನೆರವನ್ನು ದೇವದಾಸಿ ಮಕ್ಕಳ ಶಿಕ್ಷಣವನ್ನು ಪೂರ್ತಿ ಮಾಡಲು ನೀಡಬೇಕು ಎಂದು ಈ ಬಾಲಕಿ ಹೇಳುತ್ತಾಳೆ.
ತಮ್ಮ ಭವಿಷ್ಯದ ಚಿಂತೆ ಜೊತೆಗೆ ತಾಯಿಯ ಜೊತೆಗಾರ, ನೆರೆಹೊರೆಯವರು, ಗ್ರಾಮದ ಮುಖ್ಯಸ್ಥನಿಂದ ಲೈಂಗಿಕ ಕಿರುಕುಳದ ಸಮಸ್ಯೆ ಕೂಡ ಈ ಮಕ್ಕಳನ್ನು ಕಾಡುತ್ತಿವೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮತ್ತೊಬ್ಬ ಬಾಲಕಿ ಲಕ್ಷ್ಮಿ, ಸುಂದರವಾಗಿ ಹುಟ್ಟುವುದು ತಪ್ಪೆ, ನಾನು ಸುಂದರವಾಗಿದ್ದೇನೆಂದು ನಮ್ಮ ಗ್ರಾಮದ ಮುಖ್ಯಸ್ಥರು ದೇವದಾಸಿ ಪದ್ಧತಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ ನನ್ನ ತಾಯಿ ಒಪ್ಪುತ್ತಿಲ್ಲ ಎಂದು ಕಣ್ಣೀರು ಹಾಕುತ್ತಾ ಹೇಳಿದಳು.ಈ ಮಕ್ಕಳು 10ರಿಂದ 17 ವರ್ಷದೊಳಗಿನವರಾಗಿದ್ದು ಸ್ನೇಹದಂತಹ ಸರ್ಕಾರೇತರ ಸಂಘಟನೆಗಳ ನೇತೃತ್ವದ ಪುನರ್ವಸತಿ ಕೇಂದ್ರಗಳಲ್ಲಿ, ಆಂತರಿಕ ಸಮುದಾಯ ಕೇಂದ್ರಗಳಲ್ಲಿ ನೆಲೆಸಿದ್ದಾರೆ.
ಇತ್ತೀಚಿನ ಕೇಸುಗಳು: ದೇವದಾಸಿ ಪದ್ಧತಿಗೆ ಬಲವಂತವಾಗಿ ಸೇರಿಸಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಸ್ಥಳೀಯ ಕಾರ್ಯಕರ್ತರು ರಕ್ಷಿಸಿದರು,
ಕೊಪ್ಪಳ: ಒಂದು ಶಾಲೆಯ ಇಬ್ಬರು ಮಕ್ಕಳನ್ನು ದೇವದಾಸಿ ಮಾಡದಿದ್ದರೆ ಮಳೆ ಬರುವುದಿಲ್ಲ ಎಂಬ ಮೂಢನಂಬಿಕೆಯನ್ನು ಹಬ್ಬಿಸಲಾಗಿತ್ತು.
ಬಾಗಲಕೋಟೆ: ದೇವದಾಸಿಯ ಮಗಳನ್ನು ನೋಡಲು ಬಂದ ಹುಡುಗನನ್ನು ಗ್ರಾಮಸ್ಥರು ತಡೆದಿದ್ದರು. ಆದರೆ ಕಾರ್ಯಕರ್ತರು ಆ ಹುಡುಗನೊಂದಿಗೆ ದೇವದಾಸಿ ಮಗಳನ್ನು ಮದುವೆ ಮಾಡಿಸಿದರು.
ಶೋಭಾ ಕರಂದ್ಲಾಜೆ ಹೇಳುವುದೇನು: ಇಂತಹ ಕೇಸುಗಳಲ್ಲಿ ಆರೋಪಿಗಳಿಗೆ ಕಾನೂನು ನೆರವನ್ನು ನೀಡಬಾರದು. ಅದಕ್ಕೆ ಅಡ್ವೊಕೇಟ್ ಗಳು ಸಹಾಯ ಮಾಡಬಾರದು. ಆರೋಪಿಗಳ ವಿರುದ್ಧ ವಕೀಲರು ನಿರ್ದಾಕ್ಷಿಣ್ಯತೆ ತೋರಬೇಕು.
ಆದರೆ ಪ್ರತಿಯೊಬ್ಬ ಆರೋಪಿಗಳಿಗೂ ಸಹ ಕಾನೂನು ಹೋರಾಟದ ನೆರವು ನೀಡಬೇಕು ಎನ್ನುತ್ತಾರೆ ನ್ಯಾಯಮೂರ್ತಿ ನಾಗಮೋಹನ್ ದಾಸ್.