ರಾಜ್ಯ

''ಫ್ರೀ ಕಾಶ್ಮೀರ' ದೇಶದ್ರೋಹವಲ್ಲವೇ..?, ಹಾಗಾದರೆ ನ್ಯಾಯಾಲಯಕ್ಕೆ ಬನ್ನಿ': ಮಾಜಿ ಸಿಎಂ ಸಿದ್ದುಗೆ ವಕೀಲರೊಬ್ಬರ ಬಹಿರಂಗ ಸವಾಲ್!

Srinivasamurthy VN

ಬೆಂಗಳೂರು: ಫ್ರೀ ಕಾಶ್ಮೀರ ಫಲಕ ಹೊತ್ತು ಇದೀಗ ವಿಚಾರಣೆ ಎದುರಿಸುತ್ತಿರುವ ಹೊರಾಟಗಾರ್ತಿ ನಳಿನಿ ಪರವಾಗಿ ಬ್ಯಾಟಿಂಗ್ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ವಕೀಲರೊಬ್ಬರು ಬಹಿರಂಗ ಸವಾಲೆಸೆದಿದ್ದಾರೆ.

ಮೈಸೂರು ಮೂಲದ ಹಿರಿಯ ವಕೀಲ ಪಿ.ಜೆ. ರಾಘವೇಂದ್ರ ಅವರು ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವ ಮೂಲಕ ನ್ಯಾಯಾಲಯಕ್ಕೆ ಆಹ್ವಾನಿಸಿ ಬಹಿರಂಗ ಸವಾಲೆಸೆದಿದ್ದಾರೆ. 'ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಸಿದ್ದರಾಮಯ್ಯನವರೂ ಕಾನೂನು ಪದವೀಧರರು, ವಕೀಲರಾಗಿದ್ದವರು. ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲವರು. ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದು ಸಿದ್ದರಾಮಯ್ಯನವರು ಮಾಧ್ಯಮಗಳ ಮುಂದೆ ಗುಡುಗುವ ಬದಲಾಗಿ ಅವರೇ ಕರಿಕೋಟು ಧರಿಸಿ ನ್ಯಾಯಾಲಯದಲ್ಲಿ ಆಪಾದಿತೆಯಾದ ನಳಿನಿಯ ಪರವಾಗಿ ವಕಾಲತ್ತು ವಹಿಸಲಿ. ಆಕೆಯ ವಿರುದ್ಧ ದಾಖಲಾದ ಪ್ರಕರಣವನ್ನೇ ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ವಾದ ಮಂಡಿಸುವುದರ ಜೊತೆಗೆ ಈ ಪ್ರಕರಣವನ್ನು ದಾಖಲಿಸಿದ ಪೊಲೀಸರು ಮತ್ತು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ ಆ ದಂಡದ ಮೊತ್ತವನ್ನು ಪರಿಹಾರದ ರೂಪದಲ್ಲಿ ಆಪಾದಿತೆ ನಳಿನಿಗೆ ದೊರಕಿಸುವಂತೆ ಸಂವಿಧಾನಬದ್ಧವಾಗಿ ಹೋರಾಟ ನಡೆಸಲಿ ಎಂದು ಹೇಳಿದ್ದಾರೆ.

ರಾಘವೇಂದ್ರ ಅವರ ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ಹಿಂದೆ ಫ್ರೀ ಕಾಶ್ಮೀರ ಫಲಕ ಹಿಡಿದು ಹೋರಾಟ ಮಾಡಿದ್ದ ನಳಿನಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನಳಿನಿ ಪರವಾಗಿ ವಾದ ಮಾಡದಂತೆ ಮೈಸೂರು ನ್ಯಾಯವಾಧಿಗಳು ನಿರ್ಧರಿಸಿದ್ದರು. ಈ ಕುರಿತಂತೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ಫ್ರೀ ಕಾಶ್ಮೀರ ಫಲಕ ಹಿಡಿದರೆ ಅದು ದೇಶದ್ರೋಹವಲ್ಲ ಎಂದು ಹೇಳಿದ್ದರು. 

SCROLL FOR NEXT