ರಾಜ್ಯ

ಬಿಸಿಯೂಟ ತಯಾರಕರ ಸಂಬಳ ವಿಳಂಬವಾದ್ದಲ್ಲಿ ಅಧಿಕಾರಿಗಳ ಸಂಬಳವೂ ವಿಳಂಬ- ಶಿಕ್ಷಣ ಇಲಾಖೆ 

Nagaraja AB

ಬೆಂಗಳೂರು: ಬಿಸಿಯೂಟ ತಯಾರಕರ ಸಂಬಳವನ್ನು ಸರಿಯಾದ ವೇಳೆಗೆ ನೀಡದ ಅಧಿಕಾರಿಗಳ ಸಂಬಳವನ್ನು ವಿಳಂಬ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಜನವರಿ 21ರಂದು ರಾಜ್ಯದ ವಿವಿಧೆಡೆಯಿಂದ ಬಂದಿದ್ದ   ಬಿಸಿಯೂಟ ತಯಾರಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರು. ಅದೇ ದಿನ ಅವರ ಕೆಲವೊಂದು ಬೇಡಿಕೆಗಳ ಕುರಿತಂತೆ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿ ತಿಂಗಳು 5ನೇ ತಾರೀಖಿಗೂ ಮುಂಚೆ ಸಂಬಳ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ವಿಳಂಬವಾದ್ದಲ್ಲಿ ಸಹಾಯಕ ನಿರ್ದೇಶಕರ ಸಂಬಳವನ್ನು ಮೊದಲಿಗೆ ವಿಳಂಬ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ

ಬಿಸಿಯೂಟ ತಯಾರಕರ ಕೆಲವೊಂದು ಕುಂದುಕೊರತೆಗಳನ್ನು ಬಗೆಹರಿಸುವ ಸಂಬಂಧ ಶಿಕ್ಷಣ ಅಧಿಕಾರಿಗಳು, ಉಪ ನಿರ್ದೇಶಕರು ಹಾಗೂ ಬಿಇಓಗಳಿಗೆ ಕೆಲವೊಂದು ಆದೇಶಗಳನ್ನು ನೀಡಲಾಗಿದೆ. 

ಆದಾಗ್ಯೂ, ಬಿಸಿಯೂಟ ತಯಾರಕರ ಪ್ರಮುಖ ಬೇಡಿಕೆಯಾಗಿದ್ದ ಸಂಬಳದ ಹೆಚ್ಚಳದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ. 40 ಕ್ಕಿಂತಲೂ ಕಡಿಮೆ ವಯಸ್ಸಿನ ಕೆಲಸಗಾರರು ಪ್ರಧಾನ ಮಂತ್ರಿ ಶ್ರಮ ಯೋಗಿ ಮನ್ ಧನ್ ಪಿಂಚಣಿ ಯೋಜನೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡದ ಕೆಲಸಗಾರರು ಕೆಲಸ ತೊರೆಯುವ ಬಗ್ಗೆ  ನಿಜವಾದ ಕಾರಣಗಳನ್ನು ತಿಳಿಯಬೇಕು, ಒಂದು ವೇಳೆ ಅವರು ಸ್ವಯಂ ಪ್ರೇರಿತರಾಗಿ ಕೆಲಸ ತೊರೆದರೆ ಅದೇ ಸಮುದಾಯದ ಬೇರೊಬ್ಬರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಉಪ ನಿರ್ದೇಶಕರಿಗೆ ಆಯುಕ್ತ ಜಗದೀಶ್ ನಿರ್ದೇಶಿಸಿದ್ದಾರೆ. 

ಒಂದು ವೇಳೆ ದಾರ್ಜನ್ಯ ನಡೆದಿದ್ದಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಒಂದು ವೇಳೆ ಆರೋಪಿ ಸರ್ಕಾರಿ ನೌಕರನಾದಲ್ಲಿ ಕೇಂದ್ರ ನಾಗರಿಕ ಸೇವಾ ನಿಯಮಗಳ ಪ್ರಕರಣ ಶಿಸ್ತು ಕ್ರಮ ಜರುಗಿಸಬೇಕೆಂದು ತಿಳಿಸಲಾಗಿದೆ. 

SCROLL FOR NEXT