ರಾಜ್ಯ

ನೆರೆ ಸಂತ್ರಸ್ತರಿಗೆ 3 ತಿಂಗಳಲ್ಲಿ ಮನೆ ನಿರ್ಮಿಸಿಕೊಡದಿದ್ದರೇ ಅಮಾನತು:  ಅಶೋಕ್ ವಾರ್ನಿಂಗ್

Shilpa D

ಬೆಂಗಳೂರು: ನೆರೆ ಸಂತ್ರಸ್ತರಿಗೆ ಸೂರು ಕಟ್ಟಿಕೊಡುವ ಕೆಲಸ ಮುಗಿಸಲು ಮೂರು ತಿಂಗಳ ಗಡುವು ನೀಡಿದ್ದು,ಅಷ್ಟರಲ್ಲಿ ಕೆಲಸ ಮುಗಿಸದೇ ಇದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊ ಳ್ಳುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಲ್ಲೆಲ್ಲಿ ತಳಪಾಯಗಳನ್ನು ಹಾಕುತ್ತಿದ್ದಾರೋ ಅಲ್ಲಿ 15 ದಿನಗಳ ಒಳಗೆ ಶೇ 50 ರಷ್ಟು ಗುರಿಯನ್ನು ಮುಟ್ಟಬೇಕು. ಆಗ ಮಾತ್ರ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು. ಈಗಾಗಲೇ ತಲಾ ₹1 ಲಕ್ಷ ಬಿಡುಗಡೆ ಮಾಡಲಾಗಿದ್ದು, ಎರಡನೇ ಕಂತಿನ ಹಣವನ್ನು ತಳಪಾಯ ಹಾಕುವ ಕೆಲಸ ಪೂರ್ಣಗೊಳಿಸಿದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಎ ಮತ್ತು ಬಿ ಕೆಟಗರಿಯ ಮನೆಗಳನ್ನು ಪೂರ್ಣ ನೆಲಸಮ ಮಾಡಿ ಹೊಸದಾಗಿ ಕಟ್ಟಲು ಒಪ್ಪುತ್ತಿಲ್ಲ. ಇದ್ದ ಮನೆಯನ್ನು ಭಾಗಶಃ ರಿಪೇರಿ ಮಾಡುವವರಿಗೆ ₹3 ಲಕ್ಷ ಮತ್ತು, ಪೂರ್ಣ ಹೊಸದಾಗಿ ಕಟ್ಟುವವರಿಗೆ ₹5 ಲಕ್ಷ ನೀಡಲಾಗುವುದು ಎಂದರು.

ಪ್ರತಿ ತಿಂಗಳ ಮೂರನೇ ಶನಿವಾರ ಎಲ್ಲ ಜಿಲ್ಲಾಧಿಕಾರಿಗಳೂ ಒಂದೊಂದು ಗ್ರಾಮವನ್ನು ಆಯ್ದುಕೊಂಡು ಅಲ್ಲಿಗೆ ಹೋಗಿ, ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಬೇಕಾಗುತ್ತದೆ. ಹಳ್ಳಿ ವಾಸ್ತವ್ಯವನ್ನೂ ಮಾಡಬಹುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಜತೆ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರೂ ಹಳ್ಳಿಗೆ ಹೋಗಬೇಕಾಗುತ್ತದೆ. ನಂತರದ ಹಂತದಲ್ಲಿ ಉಪವಿಭಾಗಾಧಿಕಾರಿಗಳು ತಿಂಗಳಲ್ಲಿ ಎರಡು ದಿನ, ತಹಶೀಲ್ದಾರರು ನಾಲ್ಕು ದಿನಗಳ ಕಾಲ ಹಳ್ಳಿಗಳಿಗೆ ಕಳುಹಿಸುವ ಚಿಂತನೆ ಇದೆ ಎಂದರು.

ಮುಖ್ಯವಾಗಿ, ಬಾಲ್ಯ ವಿವಾಹದ ಬಗ್ಗೆ ಅರಿವು, ಸ್ಮಶಾನಕ್ಕೆ ಜಾಗ ಮೀಸಲು, ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವುದು, ಪೌತಿ ಖಾತೆ, ಜಾತಿ ಪ್ರಮಾಣ ಪತ್ರ ಮತ್ತಿತರ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕಂದಾಯ ಇಲಾಖೆಗೆ ಸಂಬಂಧಿಸಿದ ಶೇ 90 ರಷ್ಟು ಕೆಲಸಗಳನ್ನು ಮಾಡಲಾಗುವುದು. ಬೇರೆ ಇಲಾಖೆಗಳಿಗೆ ಸಂಬಂಧಿಸಿದ ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾದರೆ, ಆಯಾ ಇಲಾಖೆಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆ ಜನಸ್ನೇಹಿ ಆಗಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಲಾಗುವುದು.  ನಾನೂ ಯಾವುದಾದರೂ ಒಂದು ಜಿಲ್ಲೆಯ ಒಂದು ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದರು.

SCROLL FOR NEXT