ರಾಜ್ಯ

ಒಆರ್ ಆರ್ ಯೋಜನೆಯಿಂದ 8,500 ಮರಗಳಿಗೆ ಕುತ್ತು: ವರದಿ

Srinivas Rao BV

ಬೆಂಗಳೂರು: ಅಜಿಂ ಪ್ರೇಮ್ ಜಿ ವಿಶ್ವವಿದ್ಯಾನಿಲಯ ನಡೆಸಿರುವ ಪರಿಸರೀಯ ಪರಿಣಾಮ ನಿರ್ಧರಿಸುವಿಕೆ (ಪರಿಸರೀಯ ಪರಿಣಾಮ ನಿರ್ಧರಿಸುವಿಕೆ) ವರದಿಯ ಪ್ರಕಾರ ಬೆಂಗಳೂರಿನ ಪೆರಿಫರಲ್‌ ರಸ್ತೆಗಳ ಅಗಲೀಕರಣದಿಂದ ಬರೊಬ್ಬರಿ 8,500 ಮರಗಳಿಗೆ ಕುತ್ತು ಎದುರಾಗಲಿದೆ. 

ಬೆಂಗಳೂರು ನಗರದ ಮೂಲಸೌಕರ್ಯ ಯೋಜನೆಗಳಿಗಾಗಿ ಅತಿಯಾಗಿ ಮರಗಳ ಮಾರಣ ಹೋಮ ನಡೆಸುತ್ತಿರುವುದರ ಬಗ್ಗೆ ಬೆಂಗಳೂರು ಎನ್ವೈರ್ನಮೆಂಟ್ ಟ್ರಸ್ಟ್ ಸಲ್ಲಿಸಿರುವ ಪಿಐಎಲ್ ಗೆ ಪೂರಕವಾಗಿ ಈ ವರದಿಯನ್ನು ಕರ್ನಾಟಕ ಹೈಕೋರ್ಟ್ ಗೆ ಸಲ್ಲಿಸಲಾಗಿದೆ. ಆದರೆ ಹೊರ ವರ್ತುಲ ರಸ್ತೆ ಯೋಜನೆಗಳಿಗಾಗಿ ಈ ಮಾದರಿಯ ಇಐಎಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಕಾರ್ಪೊರೇಶನ್ ಲಿಮಿಟೆಡ್ (ಕೆಆರ್ ಡಿಸಿಎಲ್) ಇನ್ನಷ್ಟೇ ನಡೆಸಬೇಕಿದೆ.

ಸೀಮಾ ಮುಂಧೋಳಿ, ರಂಜಿನಿ ಮುರಳಿ ಹಾಗೂ ಹರಿಣಿ ನಾಗೇಂದ್ರ ಅವರು ಫೆ.29-ಮಾ.06 ವರೆಗೆ ನಡೆಸಿರುವ ಸಂಶೋಧನೆಯ ಪ್ರಕಾರ 152.03 ಕಿ.ಮೀ ನಷ್ಟು ಉದ್ದದ ರಸ್ತೆ ಯೋಜನೆಗಾಗಿ 8,500 ಮರಗಳನ್ನು ಕಡಿಯಬೇಕಾಗುತ್ತದೆ. ಯೋಜನೆಯ ಕಾರ್ಯಸಾಧ್ಯತಾ ವರದಿಗಳು ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಮಾಹಿತಿ ನೀಡುವಲ್ಲಿ ವಿಫಲವಾಗಿವೆ ಎಂದು ಸೀಮಾ ಮುಂದೋಳಿ ಹೇಳಿದ್ದಾರೆ. 

ಬೂದಿಗೆರೆ ಕ್ರಾಸ್ ನಿಂದ ಮೈಲನಹಳ್ಳಿ, ನೆಲಮಂಗಲದಿಂದ ಮದುರೆ, ಮದುರೆಯಿಂದ ಎಸ್ಎಂವಿಐಟಿ ಕ್ರಾಸ್ ದೇವನಹಳ್ಳಿ ರಸ್ತೆ, ಕಂಚುಗಾರನಹಳ್ಳಿಯಿಂದ ಜಿಗಣಿ, ಬನ್ನೇರುಘಟ್ಟ-ಬೆಸ್ತಹಮ್ಮನಹಳ್ಳಿ ಹಾಗೂ ಬೆಸ್ತಹಮ್ಮನಹಳ್ಳಿಯಿಂದ ಹೊಸಕೋಟೆ ವರೆಗೂ 2-4, 4-6 ಲೇನ್ ಗಳ ರಸ್ತೆ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಜನೆ ಪ್ರಾರಂಭವಾಗುವುದಕ್ಕೂ ಮುನ್ನವೇ ಹಲವು ಹಳೆಯ ಮರಗಳು ಧರೆಗುರುಳಿವೆ ಅಥವಾ ಕಡಿಯಲಾಗಿವೆ ಎಂದು ಯೋಜನಾ ಸಾಧ್ಯತೆಗಳ ವರದಿಯಲ್ಲಿ ತಿಳಿಸಿದ್ದಾರೆ. ಆದರೆ ವಾಸ್ತವದಲ್ಲಿ ಅದಕ್ಕಿಂತಲೂ ಹೆಚ್ಚು ಮರಗಳು ಧರಾಶಾಹಿಯಾಗಿವೆ ಎಂದು ಕಂಚುಗಾರನಹಳ್ಳಿ ಹಾಗೂ ಜಿಗಣಿ ಬಳಿ 1,000 ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲು ಗುರಿತಿಸಲಾಗಿದೆ ಹಲವು ಪಾರಂಪರಿಕ ಮರಗಳು ಈ ವ್ಯಾಪ್ತಿಯಲ್ಲಿವೆ.

ಮದುರೆ-ನೆಲಮಂಗಲದ 15 ಕಿ.ಮೀ ವ್ಯಾಪ್ತಿಯಲ್ಲಿ 206 ಆಲದ ಮರಗಳನ್ನು ಕಡಿಯಲಾಗುತ್ತದೆ ಹಾಗೂ 15 ಪವಿತ್ರ ಅಶ್ವತ್ಥಕಟ್ಟೆಗಳನ್ನೂ ಸಹ ತೆಗೆಯುವುದಕ್ಕೆ ಗುರುತಿಸಲಾಗಿದೆ. ಇನ್ನು ಆನೇಕಲ್ ಮೀಸಲು ಅರಣ್ಯ ಪ್ರದೇಶ ಹಾಗೂ ಜುನ್ನಸಂದ್ರ ಮಿನಿ ಅರಣ್ಯ ಪ್ರದೇಶಗಳಲ್ಲಿಯೂ ಈ ಯೋಜನೆಯಿಂದಾಗಿ ಹಲವು ವನ್ಯ ಸಂಕುಲಗಳ ಮೇಲೆ ಹಾಗೂ 14 ಕೆರೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಅಜಿಮ್ ಪ್ರೇಮ್ ಜಿ ವಿವಿ ನಡೆಸಿರುವ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 

SCROLL FOR NEXT