ರಾಜ್ಯ

ಕರಾವಳಿ, ಮಲೆನಾಡಿನ ಕೆಂಪಿರುವೆ ಚಟ್ನಿ ಸವಿಯಿರಿ: ದೇಸಿ-ಸಾಂಪ್ರದಾಯಿಕ ತಿನಿಸುಗಳಿಗೆ ಪ್ರವಾಸೋದ್ಯಮ ಇಲಾಖೆ ಒತ್ತು!

Sumana Upadhyaya

ಬೆಂಗಳೂರು: ಕೋವಿಡ್-19 ಬಂದ ಮೇಲೆ ಸ್ಥಳೀಯತೆಗೆ ಆದ್ಯತೆ ನೀಡಿ ಎಂಬ ಕೂಗು ಕೇಳಿಬರುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆತ್ಮನಿರ್ಭರಕ್ಕೆ ಕರೆ ಕೊಟ್ಟಿದ್ದಾರೆ. ಅದಕ್ಕೆ ರಾಜ್ಯದ ಪ್ರವಾಸೋದ್ಯಮ ಇಲಾಖೆ ಸಹ ಒತ್ತು ನೀಡುತ್ತಿದೆ.

ಸ್ಥಳೀಯ ವಸ್ತುಗಳೆಂದರೆ ಕೇವಲ ಬಟ್ಟೆಗಳು, ಆಟಿಕೆಗಳು ಮತ್ತು ಇತರ ಸಾಮಾನುಗಳು ಮಾತ್ರವಲ್ಲ, ನಾವು ಸೇವಿಸುವ ಆಹಾರ ಕೂಡ ದೇಸೀ ಸ್ಥಳೀಯ ಆಹಾರವಾಗಿದ್ದರೆ ಉತ್ತಮ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಸ್ಥಳೀಯ, ಸಾಂಪ್ರದಾಯಿಕ ಆಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಪ್ರವಾಸೋದ್ಯಮ ಇಲಾಖೆ ಅಂಥವುಗಳಲ್ಲೊಂದು ಬೆಂಕಿ ಕೆಂಪು ಇರುವೆ ಚಟ್ನಿ ಚಿಗ್ಲಿಗೆ ಪ್ರಚಾರ ನೀಡುತ್ತಿದೆ.
ಕೆಂಪು ಇರುವೆಗಳ ಚಟ್ನಿಯನ್ನು ಚಿಗ್ಲಿ ಎಂದು ಕರೆಯಲಾಗುತ್ತಿದ್ದು ಇವುಗಳ ಸೇವನೆಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಅರೆ ಇದೇನಿದು, ಕೆಂಪು ಇರುವೆ ಚಟ್ನಿ ಎಂದು ಹಲವರು ಹುಬ್ಬೇರಿಸಿದ್ದು ಉಂಟು.

ಪ್ರವಾಸೋದ್ಯಮ ಇಲಾಖೆ ಏನು ಹೇಳುತ್ತದೆ?:ನಮ್ಮ ರಾಜ್ಯದ ಮಲೆನಾಡು, ಕರಾವಳಿ ಭಾಗಗಳಲ್ಲಿ ಈ ಚಟ್ನಿ ಜನಪ್ರಿಯ. ಚಳಿಗೆ ಈ ಚಟ್ನಿ ಅತ್ಯಂತ ರುಚಿಕರವಾಗಿದ್ದು ಪ್ರೊಟೀನ್ ಗಳಿಂದ ಸಹ ಕೂಡಿರುತ್ತದೆ. ನ್ಯೂಮೋನಿಯಾ, ಕಫ, ಕೆಮ್ಮನ್ನು ದೂರ ಮಾಡುತ್ತದೆ ಎಂಬ ನಂಬಿಕೆಯಿದೆ. ಕೇವಲ ವಸ್ತುಗಳಲ್ಲಿ ಮಾತ್ರವಲ್ಲದೆ ತಿನ್ನುವ ಆಹಾರದಲ್ಲಿ ಕೂಡ ಸ್ಥಳೀಯತೆಗೆ ಒತ್ತು ನೀಡುವಂತೆ ನಾವು ಜನರನ್ನು ಕೇಳಿಕೊಳ್ಳುತ್ತೇವೆ. ಯಾರಾದರೂ ನಾಗರಿಕರು ಬಹಳ ಅಪರೂಪದ ಇಂತಹ ತಿನಿಸುಗಳ ಬಗ್ಗೆ ಗೊತ್ತಿದ್ದರೆ ಮಾಹಿತಿಯನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಥವಾ ಬೇರೆ ಮಾಧ್ಯಮಗಳ ಮೂಲಕ ಹಂಚಿಕೊಳ್ಳಬಹುದು ಎನ್ನುತ್ತಾರೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ.

ಇಲಾಖೆ ಇತರ ಹಲವು ರೆಸಿಪಿಗಳನ್ನು ಹಂಚಿಕೊಳ್ಳುತ್ತಿದೆ ಉದಾಹರಣೆಗೆ ಕರ್ಚಿಕಾಯಿ ಪಲ್ಯ, ಹಲಸಿನ ಹಣ್ಣು ಗಟ್ಟಿ ಮತ್ತು ಕಿಸ್ಮುರಿ. ಬೇರೆ ರಾಜ್ಯಗಳ ಜನರನ್ನು ಸಹ ಕರ್ನಾಟಕದತ್ತ ಸೆಳೆಯುವುದು ಇಂತಹ ಅಪರೂಪದ ತಿನಿಸುಗಳನ್ನು ಹಂಚಿಕೊಳ್ಳುವುದರ ಉದ್ದೇಶ ಎನ್ನುತ್ತಾರೆ ಇಲಾಖೆ ನಿರ್ದೇಶಕ ಕೆ ಎನ್ ರಮೇಶ್.

ಚಿಗ್ಲಿ ಚಟ್ನಿ ವಿಚಾರದಲ್ಲಿ ಹಲವು ಮಸಾಲೆಗಳನ್ನು ಸೇರಿಸಿದರೆ ಉತ್ತರ ಕರ್ನಾಟಕದ ಕಡೆಯ ಚಟ್ನಿ, ತೆಂಗಿನ ಕಾಯಿ ಸೇರಿಸಿದರೆ ಮಲೆನಾಡು, ಕರಾವಳಿ ಭಾಗದ ಚಟ್ನಿಯಾಗುತ್ತದೆ. ಮಂಗಳೂರಿನಲ್ಲಿ ನಾನು ಇದನ್ನು ತಿಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ ಎನ್ನುತ್ತಾರೆ ಕೆ ಎನ್ ರಮೇಶ್.

SCROLL FOR NEXT