ರಾಜ್ಯ

ಪ್ರೇಮ ವಿವಾಹಕ್ಕೆ ವಿರೋಧ: ಯುವಕನ ಕುಟುಂಬದ ನಾಲ್ವರ ಬರ್ಬರ ಹತ್ಯೆ

Srinivasamurthy VN

ರಾಯಚೂರು: ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿ ಯುವತಿ ಕುಟುಂಬಸ್ಥರು ಯುವಕನ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ರಾಯಚೂರಿನ ಸಿಂಧನೂರು ಪಟ್ಟಣದ ಸುಕಾಲಪೇಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿಯ ಕಡೆಯವರು ಯುವಕನ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸುಮಿತ್ರಾ (55), ಶ್ರೀದೇವಿ (36), ಹನುಮೇಶ್ (35), ನಾಗರಾಜ್ (38) ಕೊಲೆಯಾದವರು ಎಂದು ಗುರುತಿಸಲಾಗಿದೆ. ದೊಣ್ಣೆ, ಕಲ್ಲುಗಳಿಂದ ಹೊಡೆದು ಬರ್ಬರವಾಗಿ ಯುವತಿಯ ಮನೆಯವರು ಹತ್ಯೆ ಮಾಡಿದ್ದಾರೆ.

 ಮೂಲಗಳ ಪ್ರಕಾರ ಕಳೆದ ಐದು ತಿಂಗಳ ಹಿಂದೆ ಒಂದೇ ಕೋಮಿನ ಯುವಕ- ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಿದ್ದರು. ಇದೇ ಹಿನ್ನೆಲೆಯಿಂದ ಇಂದು ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಯುವತಿಯ ಮನೆಯವರಾದ ಅಂಬಣ್ಣ ಹಾಗೂ ಫಕ್ಕೀರಪ್ಪ ಎಂಬುವವರು ಯುವಕನ ಕುಟುಂಬದವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಲ್ವರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀವಭಯದಿಂದ ಯುವಕ ಮತ್ತು ಯುವತಿ ಪೋಲೀಸ್ ಠಾಣೆಗೆ ಹೋಗಿದ್ದರಿಂದ ಅವರಿಬ್ಬರು ಸುರಕ್ಷಿತವಾಗಿದ್ದಾರೆ.

ಇನ್ನು ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

SCROLL FOR NEXT