ರಾಜ್ಯ

ಚಿಕ್ಕಮಗಳೂರು: ಹಾಡಹಗಲೇ ದರೋಡೆಗೆ ಯತ್ನಿಸಿ ಫೈರಿಂಗ್

Raghavendra Adiga

ಚಿಕ್ಕಮಗಳೂರು: ಕಾಫಿನಾಡಲ್ಲಿ ಹಾಡಹಗಲೇ ಆಭರಣ ಮಳಿಗೆಗೆ ದುಷ್ಕರ್ಮಿಗಳ ತಂಡವೊಂದು ನುಗ್ಗಿ ದರೋಡೆಗೆ ಯತ್ನಿಸಿ, ಫೈರಿಂಗ್ ಮಾಡಿರುವ ಘಟನೆ ನಗರದ ಎಂ.ಜಿ.ರಸ್ತೆಯ ಕೇಸರಿ ಜ್ಯೂವೆಲರ್ಸ್ ನಲ್ಲಿ ವರದಿಯಾಗಿದೆ.

ಶನಿವಾರ ಬೆಳ್ಳಿಗೆ 11.25ರ ಸುಮಾರಿಗೆ ಮೂವರು ದುಷ್ಕರ್ಮಿಗಳು ಅಂಗಡಿಗೆ ದರೋಡೆಗೆ ಯತ್ನಿಸಿ, ಮೂರು ಗುಂಡು ಹಾರಿಸಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಅಂಗಡಿ ಮಾಲೀಕ ಜಯಪ್ರಕಾಶ್ ಅವರಿಗೆ ಗಾಜು ತಗುಲಿ ಗಾಯವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಪ್ರತಿಕ್ರಿಯಿಸಿ, ಮೂವರು ದುಷ್ಕರ್ಮಿಗಳು ಪಲ್ಸರ್ ಬೈಕಿನಲ್ಲಿ ಬಂದು ದರೋಡೆಗೆ ಯತ್ನಿಸಿ, ಮೂರು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಅಂಗಡಿ ಮಾಲೀಕ ಜಯಪ್ರಕಾಶ್ ಅವರಿಗೆ ಗಾಜು ತಗುಲಿ ಗಾಯವಾಗಿದೆ ಎಂದರು.

ಮೂವರಲ್ಲಿ ಓರ್ವ ಹೆಲ್ಮೆಟ್ ಹಾಕಿಕೊಂಡಿದ್ದು, ಇಬ್ಬರೂ ಮಾಸ್ಕ್ ಧರಿಸಿದ್ದರು ಎಂದು ಅಂಗಡಿಯವರು ಮಾಹಿತಿ ನೀಡಿದ್ದಾರೆ. ಸದ್ಯ ಮಳಿಗೆಯಲ್ಲಿನ ಸಿ.ಸಿ ಟಿವಿ ದೃಶ್ಯವಳಿಗಳನ್ನು ಪಡೆದುಕೊಳ್ಳಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸದ್ಯ ವಿಶೇಷ ತಂಡ ರಚಿಸಿ ದರೋಡೆಕೋರರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

SCROLL FOR NEXT